Sunday, April 17, 2011

ಕಾಸ್ಮಿಕ್ ಕ್ಯಾಲೆಂಡರ್


ಇಂಥದೊಂದು ಸನ್ನಿವೇಶವನ್ನು ಊಹಿಸಿಕೊಳ್ಳಿ : ಕ್ರಿಸ್ತಪೂರ್ವದ ಅವಧಿಯಲ್ಲಿ ಬದುಕಿದ್ದ ವ್ಯಕ್ತಿಯೊಬ್ಬ ಇದ್ದಕಿದ್ದಂತೆ ಯಾವುದೋ ಅತೀಂದ್ರಿಯ ಶಕ್ತಿಯ ಸಹಾಯದಿಂದ (ಊಹಿಸಿಕೊಳ್ಳಲಡ್ಡಿಯೇನಿಲ್ಲ) ಇಂದಿನ ಯುಗಕ್ಕೆ ಪ್ರವೇಶಿಸುತ್ತಾನೆ ಎಂದಿಟ್ಟುಕೊಳ್ಳಿ. ಅವನಿಗೆ ಈಗಿನ ಪ್ರಪಂಚ ಹೇಗೆ ಕಾಣಿಸೀತು? ಭರ ಭರನೆ ಶರವೇಗದಲ್ಲಿ ಓಡುವ ಕಾರು ಬಸ್ಸುಗಳು, ಆಗಸದಲ್ಲಿ ಹಾರಾಡುವ ವಿಮಾನಗಳು, ಗಗನಚುಂಬಿ ಕಟ್ಟಡಗಳು, ರಸ್ತೆಯುದ್ದಕ್ಕೂ ಸಾಲಾಗಿ ನಿಂತಿರುವ ಬೆಳಕು ಸೂಸುವ ವಿದ್ಯುದ್ದೀಪಗಳು, ನಿಯಾನ್ ಬೆಳಕಿನಲ್ಲಿ ಹೊಳೆಯುವ ಜಾಹಿರಾತು ಫಲಕಗಳು, ಟಿ.ವಿ, ಮೊಬೈಲ್, ಕ್ಯಾಮೆರಾ ಇತ್ಯಾದಿ ಇವನ್ನೆಲ್ಲಾ ನೋಡಿ ಅವನಿಗೇನನ್ನಿಸಬಹುದು? ತಾನೆಲ್ಲೋ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದೇನೆನಿಸಿದರೆ ಅಚ್ಚರಿಯೇನಿಲ್ಲ. ಇದೊಂದು ಅದ್ಭುತ ಲೋಕ, ಮಾನವ ಇದನ್ನೆಲ್ಲಾ ಸಾಧಿಸಲಾರ, ಇದರ ಹಿಂದೆ ಯಾವುದೋ ಮಾಂತ್ರಿಕ ಶಕ್ತಿಯ ಕೈವಾಡವಿರಬೇಕೆಂದೇ ಅವನಿಗನಿಸುತ್ತದೆ.

ನಾವೆಲ್ಲಾ ಶಾಲೆಗಳಲ್ಲಿ ಇತಿಹಾಸ ಓದಿರುವುದರಿಂದ ನಮ್ಮ ಇಂದಿನ ಬೆಳವಣಿಗೆಯ ಹಿಂದೆ ಮಾನವನ ಸಹಸ್ರಾರು ವರ್ಷಗಳ ಅಪಾರ ಪರಿಶ್ರಮವಿದೆಯೆಂದು ತಿಳಿದಿದ್ದೇವೆ . ನಾವು ಇದನ್ನೆಲ್ಲಾ ಗಳಿಗೆಯಲ್ಲಿ ಸಂಪಾದಿಸಿಲ್ಲ, ಹಂತ ಹಂತವಾಗಿ ಗಳಿಸಿದ್ದೇವೆ, ಈ ನಿಟ್ಟಿನಲ್ಲಿ ಹಲವು ಬಾರಿ ಬಿದ್ದು ಎದ್ದಿದ್ದೇವೆ. ಆದರೆ ಇದ್ಯಾವುದರ ಅರಿವಿಲ್ಲದ,  ಆಕಸ್ಮಿಕವಾಗಿ ಪುರಾತನ ಕಾಲದಿಂದ ಈ ಕಾಲಕ್ಕೆ ಜಿಗಿದು ಬಂದ ವ್ಯಕ್ತಿಗೆ ನಾವೊಂದಿಷ್ಟು ತಾಳ್ಮೆಯಿಂದ ಮಾನವ ಬೆಳೆದು ಬಂದ ಹಾದಿ,   ನಿಸರ್ಗದ ನಿಯಮಗಳು, ಹಾಗೂ ನಮ್ಮ ಯಂತ್ರಗಳ ಹಿಂದಿನ ತಂತ್ರಜ್ಞಾನವನ್ನು ಬಿಡಿಸಿ ಹೇಳಿದರೆ ಹಾಗೂ ಅವನೂ ತಾಳ್ಮೆಯಿಂದ ಇವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅವನ ಈ ಎಲ್ಲಾ ಸಂದೇಹಗಳನ್ನು ನಿವಾರಿಸಬಹುದು. ನಮಗೆ ಈ ವ್ಯಕ್ತಿ ಪೆದ್ದನಂತೆ ಕಾಣಬಹುದು. ಆದರೆ ಹಾಗೆ ಕರೆಯುವ ಮುನ್ನ,  ಆಧುನಿಕ ಯುಗದಲ್ಲಿ ಬದುಕುತ್ತಿರುವ ನಮ್ಮ ಪರಿಸ್ಥಿತಿ ಇದಕ್ಕಿಂತ ತುಂಬಾ ಹೆಚ್ಚೇನೂ ಭಿನ್ನವಿಲ್ಲ ಎಂಬುದನ್ನರಿಯಬೇಕು .

ಹಲವು ಕವಿಗಳು ಪ್ರಕೃತಿಯ ಸೌಂದರ್ಯಕ್ಕೆ ಹಾಗೂ ಅದರ ವೈವಿಧ್ಯತೆಗೆ ಮಾರು ಹೋಗಲಿಲ್ಲವೇ? ಪ್ರಕೃತಿಯ ಈ ಸೌಂದರ್ಯ ಮತ್ತು ವೈವಿಧ್ಯತೆಯ ಹಿಂದೆ ಕಾಣದ ಶಕ್ತಿಯ (ದೇವರ)  ಪ್ರೇರಣೆಯಿದೆ ಎಂದು ಹೇಳುವ ಆಧ್ಯಾತ್ಮಿಕ ಗುರುಗಳಿಲ್ಲವೇ? ಅವರನ್ನು ಬಿಡಿ ನಮಗೂ ಪ್ರಕೃತಿಯ ಸೊಬಗನ್ನು ನೋಡಿ ಹಲವಾರು ಪ್ರಶ್ನೆಗಳೇಳುತ್ತವೆ : ಜೇನ್ನೊಣಗಳಿಗೆ ಮತ್ತು ಗುಬ್ಬಿಗಳಿಗೆ ಅಷ್ಟೊಂದು ಕಲಾತ್ಮಕತೆಯಿಂದ ಹಾಗೂ ತಂತ್ರಗಾರಿಕೆಯಿಂದ ತಮ್ಮ ಗೂಡು ಕಟ್ಟಲು ಹೇಳಿಕೊಟ್ಟವರಾರು? ಬುದ್ಧಿವಂತಿಕೆಯಿಂದ ಹೊಂಚು ಹಾಕಿ ಬೇಟೆಯಾಡುವ ಪ್ರಾಣಿಗಳಿಗೆ ಹಾಗೆ ಹೊಂಚು ಹಾಕುವುದನ್ನು ಕಲಿಸಿ ಕೊಟ್ಟವರಾರು? ಪರಭಕ್ಷಿ ಪ್ರಾಣಿಗಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ವಿವಿಧ ದೇಹರಚನೆ, ರೂಪ,  ಬಣ್ಣ ಹಾಗೂ ವಿನ್ಯಾಸವನ್ನು ಹೊಂದಿರುವ ಪ್ರಾಣಿಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ, ಈ ಪ್ರಾಣಿಗಳಿಗೆ ಈ ರೂಪ ಮತ್ತು ಬಣ್ಣ ಯಾವುದೋ ಅಗೋಚರ ಶಕ್ತಿ ದಯಪಾಲಿಸಿತೇ ಅಥವಾ ಆ ಪ್ರಾಣಿಗಳೇ ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡವೇ?  ಸಸ್ಯಗಳೇನು ಕಡಿಮೆ : ಪರಾಗಸ್ಪರ್ಷಕ್ಕೆ ಅನುವಾಗಲೆಂದು ಕೀಟಗಳನ್ನು ಆಕರ್ಷಿಸುತ್ತವೆ, ಕೀಟಗಳನ್ನು ಆಕರ್ಷಿಸಲು ರಂಗುರಂಗಿನ, ವೈವಿಧ್ಯಮಯ ವಿನ್ಯಾಸಗಳನ್ನುಳ್ಳ ಹೂಗಳನ್ನು ಹೊಂದಿರುತ್ತವೆ, Give and Take policy ಎಂಬಂತೆ, ಕೀಟಗಳು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಅವುಗಳಿಗೆ ಸಿಹಿ ಸಿಹಿ ಮಕರಂದವನ್ನುಣಬಡಿಸುತ್ತವೆ ! ಇದೆಲ್ಲಾ ಹೇಗೆ ಸಾಧ್ಯ? ಒಂದೋ ಪ್ರಕೃತಿ ಪ್ರಜ್ಞಾಪೂರ್ವಕವಾಗಿ ಈ ಶಕ್ತಿಯನ್ನು ಪ್ರಾಣಿ ಮತ್ತು ಸಸ್ಯ ಸಂಕುಲಗಳಿಗೆ ದಯಪಾಲಿಸಿರಬೇಕು ಅಥವಾ ಯಾವುದೋ ಅಗೋಚರ ಚೇತನವೊಂದು ಈ ಅದ್ಭುತ ಜೀವ ಜಗತ್ತನ್ನು ರೂಪಿಸಿರಬಹುದು ಎಂಬ ಭಾವನೆ ನಮ್ಮಲ್ಲಿ ಮೂಡುವುದು ಸಹಜ. ಹೀಗೆ ಯೋಚಿಸುವುದಾದರೆ ನಾವೂ, ಪುರಾತನ ಕಾಲದಿಂದ ಇಂದಿನ ಕಾಲಕ್ಕೆ ಆಕಸ್ಮಿಕವಾಗಿ ಜಿಗಿದ ಆ ವ್ಯಕ್ತಿಗಿಂತ ಹೆಚ್ಚು ಭಿನ್ನವೇನಲ್ಲ ಅಲ್ಲವೇ? ಪ್ರಕೃತಿಯ ಈ ವೈವಿಧ್ಯಮಯ ಸೊಬಗಿನ ಹಿಂದಿರುವ ರಹಸ್ಯವನ್ನರಿಯಲು ನಾವೂ ಆ ವ್ಯಕ್ತಿಯಂತೆ ನಮ್ಮ ಭೂಮಿಯ, ಅದರ ಮೇಲೆ ಜೀವಿಸಿರುವ ಸಮಸ್ತ ಜೀವಸಂಕುಲಗಳ ಇತಿಹಾಸವನ್ನರಿಯಬೇಕಾಗುತ್ತದೆ.

ನಾವಿರುವ ಈ ಭೂಮಿ ತುಂಬಾ ಹಳೆಯದು ಅದರ ವಯಸ್ಸಿನ ಮುಂದೆ ಮಾನವನ ವಯಸ್ಸು ಈಗಷ್ಟೇ ಜನಿಸಿದ ಮಗುವಿಗೆ ಸಮ. ಸೂಕ್ಷ್ಮಜೀವಿಗಳಿಂದ ಹಿಡಿದು ಅದ್ಭುತ ಬುದ್ಧಿಮತ್ತೆ ಗಳಿಸಿದ ಮಾನವನ ವರೆಗೂ ನಡೆದ ಜೀವವಿಕಾಸಕ್ಕೆ ಪ್ರಕೃತಿ ತೆಗೆದುಕೊಂಡದ್ದು ಕೆಲವೇ ವರ್ಷಗಳಲ್ಲ, ಇದಕ್ಕೆ ನಮ್ಮ ಊಹೆಗೂ ನಿಲುಕದಷ್ಟು ಸಮಯ ಹಿಡಿದಿದೆ. ಇಂದು ಭೂಗರ್ಭ ಶಾಸ್ತ್ರದ ನೆರವಿನಿಂದ ಭೂಮಿಯ ವಯೋಮಾನವನ್ನು ಅಳೆಯಬಹುದಾಗಿದೆ, ಕಾರ್ಬನ್ ಡೇಟಿಂಗ್ ನ ನೆರವಿನಿಂದ ಪ್ರಾಣಿ ಹಾಗೂ ಸಸ್ಯಗಳ ಪಳೆಯುಳಿಕೆಗಳ ಕಾಲಮಾನವನ್ನು ತಿಳಿಯಲು ಸಾಧ್ಯವಾಗಿದೆ. ಸೂರ್ಯ, ನಕ್ಷತ್ರ, ಗೆಲಾಕ್ಸಿಗಳ ಹಾಗೂ ಬ್ರಹ್ಮಾಂಡದ ವಯೋಮಾನವನ್ನು ಖಗೋಳ ಶಾಸ್ತ್ರದ ನೆರವಿನಿಂದ ಕಂಡು ಹಿಡಿಯಬಹುದಾಗಿದೆ. ಭೂಮಿಯ ವಯಸ್ಸು ಸುಮಾರು 4.5 ಬಿಲಿಯ ವರ್ಷಗಳೆನ್ನಬಹುದು. ನಮ್ಮ ಸೂರ್ಯ ಸುಮಾರು 5 ಬಿಲಿಯ ವರ್ಷಗಳಷ್ಟು ಹಳೆಯದು. ಸೂರ್ಯನಿರುವ ಗೆಲಾಕ್ಸಿ ಮಿಲ್ಕಿವೇ ಗೆ ಸುಮಾರು  10 ಬಿಲಿಯ ವರ್ಷಗಳಷ್ಟು ವಯಸ್ಸು. ನಾವು ಬಿಗ್ ಬ್ಯಾಂಗ್  ಸಿದ್ಧಾಂತವನ್ನು ಒಪ್ಪುವುದಾದರೆ (ಒಪ್ಪಲು ಸಾಕಷ್ಟು ಪುರಾವೆಗಳಿವೆ) ಬ್ರಹ್ಮಾಂಡ ಜನ್ಮ ತಳೆದದ್ದು ಸುಮಾರು 15 ಬಿಲಿಯ ವರ್ಷಗಳಷ್ಟು ಹಿಂದೆ. ಹೀಗೆ ಭೂಮಿಯ ಅಥವಾ ಬ್ರಹ್ಮಾಂಡದ ಇತಿಹಾಸದ ಕಾಲಾವಧಿಗೆ ಮಾನವನ ಇತಿಹಾಸದ ಕಾಲವಧಿಯನ್ನು ಹೋಲಿಸಿದರೆ ಕ್ಷಣಿಕವೆಂದೇ ಹೇಳಬಹುದು. ಇದನ್ನು ವಿವರಿಸಲು ಖ್ಯಾತ ವಿಜ್ಞಾನಿ ಕಾರ್ಲ್ ಸೇಗನ್ ತಮ್ಮ ಪುಸ್ತಕ ದಿ ಡ್ರ್ಯಾಗನ್ಸ್ ಆಫ್ ಎಡೆನ್ಸ್ ನಲ್ಲಿ ಬ್ರಹ್ಮಾಂಡದ ಉಗಮದಿಂದ ಹಿಡಿದು ಇಲ್ಲಿಯವರೆಗಿನ 15 ಬಿಲಿಯನ್ ವರ್ಷಗಳ ಕಾಲಾವಧಿಯನ್ನು ಒಂದು ವರ್ಷಕ್ಕೆ ಸಂಕುಚಿತಗೊಳಿಸಿ ಬ್ರಹ್ಮಾಂಡದ ಇತಿಹಾಸವನ್ನು ವಿವರಿಸಲೆತ್ನಿಸುತ್ತಾರೆ, ಅವರು ಇದನ್ನು ಕಾಸ್ಮಿಕ್ ಕ್ಯಾಲೆಂಡರ್ ಎಂದು ಕರೆದರು. ಈ ಕಾಲಾವಧಿಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಈ ರೀತಿ ವಿವರಿಸಿದ್ದಾರೆ-



ಜನವರಿ 1 ~ ಬಿಗ್ ಬ್ಯಾಂಗ್, ಬ್ರಹ್ಮಾಂಡದ ಉಗಮ.ಮೇ 1 ~ ಮಿಲ್ಕಿ ವೇ ಗೆಲಾಕ್ಸಿಯ ಉಗಮ, ಸೆಪ್ಟೆಂಬರ್ 9 ~ ಸೌರವ್ಯೂಹದ ಉಗಮ, ಸೆಪ್ಟೆಂಬರ್ 14~ ಭೂಮಿಯ ರಚನೆ, ಸೆಪ್ಟೆಂಬರ್ 25~ ಭೂಮಿಯ ಮೇಲೆ ಮೊದಲ ಜೀವಿಗಳ ಉಗಮ, ಅಕ್ಟೋಬರ್ 2~ ನಮಗೆ ದೊರೆತಿರುವ ಅತ್ಯಂತ ಹಳೆಯ ಶಿಲೆಗಳು ರಚಿತಗೊಂಡಿದ್ದು, ಅಕ್ಟೋಬರ್ 9 ~ ನಮಗೆ ದೊರೆತಿರುವ ಅತ್ಯಂತ ಹಳೆಯ ಬ್ಯಾಕ್ಟೀರಿಯಾ ಮತ್ತು ಆಲ್ಗೇಗಳ ಪಳೆಯುಳಿಕೆಗಳು. ನವೆಂಬರ್ 1 ~ ನಿರ್ದಿಷ್ಟ ಲಿಂಗವಿರುವ ಸೂಕ್ಷ್ಮ ಜೀವಿಗಳ ಉಗಮ, ನವೆಂಬರ್ 12~ ನಮಗೆ ದೊರೆತಿರುವ ಅತ್ಯಂತ ಹಳೆಯ ದ್ಯುತಿ ಸಂಶ್ಲೇಷಣೆ (ಫೋಟೋಸಿಂಥೆಸಿಸ್) ನಡೆಸುತ್ತಿದ್ದ ಸಸ್ಯಗಳ ಪಳೆಯುಳಿಕೆಗಳು,  ನವೆಂಬರ್ 15 ~ ನ್ಯೂಕ್ಲಿಯಸ್ ಹೊಂದಿರತಕ್ಕಂತಹ ಜೀವಕೋಶಗಳ ಉಗಮ.

ಡಿಸೆಂಬರ್ 31 ~

ಮಧ್ಯಾಹ್ನ 1:30 ಕ್ಕೆ~ ಮಾನವನ ಪೂರ್ವಜರೆನ್ನಲಾದ ಪ್ರೊಕನ್ಸಲ್ ಮತ್ತು ರಾಮಾ ಪಿಥಿಕಸ್ ವಾನರರ ಜನನ. ರಾತ್ರಿ 10:30ಕ್ಕೆ ~ ಮೊಟ್ಟ ಮೊದಲ ಮಾನವನ ಉಗಮ. ರಾತ್ರಿ 11:00 ಕ್ಕೆ ~ ಮಾನವ ಶಿಲೆಗಳನ್ನು ಆಯುಧಗಳ ರೀತಿಯಲ್ಲಿ ಬಳಸುವುದನ್ನು ಕಲಿತದ್ದು. ರಾತ್ರಿ 11:46 ~ ಚೀನಾದ ಮಾನವ ಬೆಂಕಿಯನ್ನು ಬಳಸಲು ಕಲಿತದ್ದು. ರಾತ್ರಿ 11:56 ~ ಕೊನೆಯ ಹಿಮಯುಗದ ಆರಂಭ. ರಾತ್ರಿ 11:58 ~ಸಮುದ್ರ ಮಾರ್ಗದ ಮೂಲಕ ಮಾನವ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ದ್ವೀಪವನ್ನು ತಲುಪಿದ್ದು. ರಾತ್ರಿ 11:59:20 ~ಕೃಷಿ ಮಾಡುವುದನ್ನು ಆರಂಭಿಸಿದ್ದು. ರಾತ್ರಿ 11:59:35~ ಮೊಟ್ಟ ಮೊದಲ ಪಟ್ಟಣಗಳು ತಲೆಯೆತ್ತಿದವು.ರಾತ್ರಿ 11:59:51 ~ಅಕ್ಕಾಡಿಯನ್ ಸಾಮ್ರಾಜ್ಯದಲ್ಲಿ ಅಕ್ಷರಗಳನ್ನು ಬಳಸಲು ಪ್ರಾಂಭವಾಯಿತು. ರಾತ್ರಿ 11:59:53 ~ ಕಂಚಿನ ಬಳಕೆ ಮತ್ತು ದಿಕ್ಸೂಚಿಗಳ ಬಳಕೆ ಆರಂಭಗೊಂಡದ್ದು. ರಾತ್ರಿ 11:59:54 ~ ಕಬ್ಬಿಣ ಬಳಸಲು ಕಲಿತದ್ದು. ರಾತ್ರಿ 11:59:55 ~ ಬುದ್ಧನ ಜನನ. ರಾತ್ರಿ 11:59:56 ~ಕ್ರಿಸ್ತನ ಜನನ. ರಾತ್ರಿ 11:59:59 ರಿಂದ 12:00:00 ಗಂಟೆ ವರೆಗೂ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅದ್ಭುತ ಯಶಸ್ಸು ಗಳಿಸಿದ ಕಾಲವೆನ್ನಬಹುದು.



ಇಲ್ಲಿ ಕೆಲ ಘಟನೆಗಳ ಕಾಲಮಾನದಲ್ಲಿ ಸ್ಥಾನ ಬದಲಾವಣೆ ಯಾಗಬಹುದು. ಉದಾಹರಣೆಗೆ ಅತ್ಯಂತ ಪ್ರಾಚೀನ ಮಾನವನ ಉಗಮ ರಾತ್ರಿ 10:30 ರ ಬದಲಿಗೆ 10:20 ಆಗಬಹುದು, ಒಂದು ವೇಳೆ ಹಾಗಾದರೂ ವಿಶ್ವದ ಇತಿಹಾಸದ ಕಾಲಾವಧಿಗೆ ಹೋಲಿಸಿದರೆ ಈ ವ್ಯತ್ಯಾಸವನ್ನು ನಗಣ್ಯವೆನ್ನಬಹುದು. ನಾವು ಇಲ್ಲೊಂದು ವಿಶೇಷವನ್ನು ಗಮನಿಸಬೇಕು –ಭೂಮಿಯ ರಚನೆ ಸೆಪ್ಟೆಂಬರ್  14 ರಂದಾಯಿತು ಎಂದು ಕೊಳ್ಳುವುದಾದರೆ ಮಾನವ ಡಿಸೆಂಬರ್ 31 ರಾತ್ರಿ 10 ಗಂಟೆಯವರೆಗೂ ಈ ಭೂಮಿಯ ಮೇಲೆ ಕಾಲಿಟ್ಟಿರಲೇ ಇಲ್ಲ! ನಾವು ಇತಿಹಾಸದ ಪುಸ್ತಕಗಳಲ್ಲಿ ಓದಿರುವುದು ಈ ಕಾಸ್ಮಿಕ್ ಕ್ಯಾಲೆಂಡರಿನ ಕೊನೆಯ 5 – 6 ಸೆಂಕೆಡುಗಳನ್ನಷ್ಟೆ! ನಮ್ಮ ಆಯುಷ್ಯವಾದರೂ ಎಷ್ಟು ? ಹೆಚ್ಚೆಂದರೆ 100 ವರ್ಷ ಅಂದರೆ ಕಾಸ್ಮಿಕ್ ಕ್ಯಾಲೆಂಡರಿನ ಸುಮಾರು 0.2 ಸೆಕೆಂಡ್ ಗಳು ! ಜೀವವಿಕಾಸವು ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತದೆ.ಅಂದರೆ ಒಂದು ಹೊಸ ಜೀವಿಯು ಈ ಭೂಮಿಯ ಮೇಲೆ ಕಾಲಿಡಬೇಕೆಂದರೆ ಹಲವು ಲಕ್ಷ ವರ್ಷಗಳು ಹಿಡಿಯುತ್ತದೆ. ಉದಾಹರಣೆಗೆ: ನಮ್ಮ ಕಾಲಿನ ಹೆಬ್ಬೆರಳು ಆಕಾರ, ಗಾತ್ರ ಹಾಗೂ ಅವು ನಿರ್ವಹಿಸುವ ಪಾತ್ರಗಳಲ್ಲಿ ಕಪಿಗಳ ಹೆಬ್ಬೆರಳಿಗಿಂತ ಭಿನ್ನ. ವಿಕಾಸದ ಹಾದಿಯಲ್ಲಿ ಇಂತಹ ಒಂದು ಚಿಕ್ಕ ಬದಲಾವಣೆಗೂ ಮಿಲಿಯಗಟ್ಟಲೆ ವರ್ಷಗಳಷ್ಟು ಸಮಯ ಹಿಡಿದಿದೆಯೆಂದರೆ ಇದೆಷ್ಟು ನಿಧಾನ ಪ್ರಕ್ರಿಯೆಯೆಂಬುದು ತಿಳಿಯುತ್ತದೆ. ಇಷ್ಟು ಅಲ್ಪಾಯುಷಿಗಳಾದ ನಮಗೆ ನಮ್ಮ ಜೀವಿತಾವಧಿಯಲ್ಲಿ ಜೀವವಿಕಾಸವನ್ನು ಕಣ್ಣಾರೆ ವೀಕ್ಷಿಸುವುದಾದರೂ ಹೇಗೆ?

ನಾವು ಇನ್ನೊಂದು ವಿಷಯವನ್ನು ಗಮನಿಸಬೇಕು-ನಮ್ಮ ಭೂಮಿಯ ಮೇಲೆ ಮೊಟ್ಟ ಮೊದಲ ಜೀವಿಯಿಂದ ಹಿಡಿದು ಮಾನವನವರೆಗೂ ಜೀವಿಸಿದ ಸಮಸ್ತ ಜೀವಸಂಕುಲಗಳಲ್ಲಿ ಈಗ ಉಳಿದಿರುವವು ಶೇಕಡ ಹತ್ತಕ್ಕಿಂತಲೂ ಕಡಿಮೆ! ಅಂದರೆ ವಿಕಾಸಗೊಂಡ ಶೇಕಡ ತೊಂಬತ್ತಕ್ಕಿಂತಲೂ ಅಧಿಕ ಜೀವಸಂಕುಲಗಳು, ನಿರಂತರ ಬದಲಾವಣೆಗೊಳಗಾಗುವ ಪ್ರಕೃತಿಗೆ ಹೊಂದಿಕೊಳ್ಳಲಾಗದೆ, ಅಳಿದು ಹೋಗಿವೆ. ಪ್ರಕೃತಿಯೆಂಬ ಈ ಸ್ವಯಂಚಾಲಿತ  ಮಹಾಪ್ರಯೋಗಾಲಯದಲ್ಲಿ ನಿರಂತರ Trial and Error ಪ್ರಯೋಗಗಳು ನಡೆಯುತ್ತಿರುತ್ತವೆ. ಈ ಪ್ರಯೋಗಗಳಿಗೆ ಯಾವುದೇ ಉದ್ದೇಶವಿಲ್ಲ. ಇಲ್ಲಿ ಉತ್ಪತ್ತಿಯಾಗುವ ಹೊಸ ಜೀವಸಂಕುಲಗಳಲ್ಲಿ ಬಹುತೇಕವು ದುರ್ಬಲವಾದವುಗಳು ಹಾಗೂ ನಿರ್ನಾಮವಾಗುವಂತಹವು. ಅಂದರೆ ಇಲ್ಲಿ ಗೆಲುವಿಗಿಂತ ಸೋಲೇ ಹೆಚ್ಚು, ಬದುಕಿಗಿಂತ ಸಾವೇ ಹೆಚ್ಚು!


ಒಂದು ವೇಳೆ ಭಗವಂತನು ಸೃಷ್ಟಿಕರ್ತನಾಗಿದ್ದರೆ, ಸರ್ವಶಕ್ತನಾಗಿದ್ದರೆ ಅವನೇಕೆ ಮಾನವನನ್ನು ಸೃಷ್ಟಿಸಲು ಬಿಲಿಯಗಟ್ಟಲೆ ವರ್ಷಗಳಷ್ಟು ಸಮಯವನ್ನು ತೆಗೆದುಕೊಂಡ? ನಿಸರ್ಗಕ್ಕೆ ಅದ್ಭುತವಾಗಿ ಹೊಂದಿಕೊಂಡಿರುವ ಇಂದಿನ ಹಲವು ಜೀವಿಗಳನ್ನು ಸೃಷ್ಟಿಸುವ ಮುನ್ನ ಅವನೇಕೆ ಇಷ್ಟು ಬಾರಿ (ಶೇಕಡ ತೊಂಬತ್ತು ಬಾರಿ) ಸೋಲುಂಡ? ಅಂದರೆ ಭಗವಂತನಿಗೂ ಮಾನವನಿಗಿರುವಂತೆ ಕಾಲದ ಮಿತಿಯಿದೆಯೇ? ಮನುಷ್ಯನು ತನ್ನ ಪ್ರಯೋಗಗಳಲ್ಲಿ ಎಡವುವಂತೆ ಅವನೂ ಎಡವುವುದಾದರೆ ಅವನನ್ನು ಸರ್ವಶಕ್ತನೆಂದು ಒಪ್ಪುವುದಾದರೂ ಹೇಗೆ?

ಕೆಲವೇ ಶತಮಾನಗಳಲ್ಲಿ ಮಾನವ ಜ್ಞಾನ- ತಂತ್ರಜ್ಞಾನ ವಿಷಯದಲ್ಲಿ ಅದ್ಭುತವೆನ್ನುವಂತಹ ಯಶಸ್ಸುಗಳಿಸಿರಬೇಕಾದರೆ ಬಿಲಿಯಗಟ್ಟಲೆ ವರ್ಷಗಳಿಂದ ನಡೆದುಕೊಂಡು ಬಂದಿರುವ ಜೀವವಿಕಾಸ ಅದಿನ್ನೆಷ್ಟು ಅದ್ಭುತಗಳನ್ನು ಸಾಧಿಸಿರಬೇಕು? 

Thursday, February 24, 2011

ಗುರು ಬ್ರಹ್ಮ, ಗುರು ವಿಷ್ಣು …ಅಂತೆಲ್ಲಾ ಕಿವಿ ಮೇಲೆ ಹೂ ಇಟ್ಟಿದ್ದು ಸಾಕು…


ನಾನು ಸುಮಾರು ಎರಡುವರೆ ವರ್ಷಗಳ ಕಾಲ ಹೈಸ್ಕೂಲ್ ಶಿಕ್ಷಕನಾಗಿ ಬಳ್ಳಾರಿಯ ಎರಡು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನನಗೆ ಶಿಕ್ಷಕನಾಗುವ ಯಾವ ಆಸೆಯೂ ಇರಲಿಲ್ಲ ಆದರೂ ಪರಿಸ್ಥಿತಿಗಳು ಅನಿವಾರ್ಯವಾಗಿ ನನ್ನನ್ನು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದವು. ನಾನು ಬಿ.ಎಡ್. ಕೋರ್ಸ್ ಮಾಡಿಕೊಂಡವನಲ್ಲ. ಚೆನ್ನಾಗಿ ಪಾಠ ಮಾಡಲು ಅಥವಾ  ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಳ್ಳಲು ಅದರ ಅಗತ್ಯವೂ ಇಲ್ಲ. ಈ ಎರಡೂವರೆ ವರ್ಷಗಳಲ್ಲಿ ಶಿಕ್ಷಕರು ಅನುಭವಿಸುವ ಸಂಕಷ್ಟಗಳನ್ನು ಹತ್ತಿರದಿಂದ ನೋಡಿರುವುದಲ್ಲದೇ ಸ್ವತಃ ಅನುಭವಿಸಿದ್ದೇನೆ ಕೂಡ.

2004 ರಲ್ಲಿ  ಖಾಸಗಿ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನನ್ನ ಸಂಬಳ ಕೇವಲ ಮೂರು ಸಾವಿರ ರೂಪಾಯಿ. ಆ ಶಾಲೆಯ ಒಡೆಯ ಸಂದರ್ಶನದ ಸಮಯದಲ್ಲಿ ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿ ಅಚ್ಚಳಿಯದೆ  ಉಳಿದಿದೆ  -          “….we used to pay Rs.2500 to previous teacher, since you are good we will pay you Rs. 3000, but I request you to not reveal your salary to any of your colleagues .…”  ಅವರ ಈ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ತಿಂಗಳಿಗೆ ಮೂರು ಸಾವಿರ ಸಂಬಳವಂತೆ! ಅದೇನೋ ಮಹಾ ದೊಡ್ಡ ಸಂಬಳವೆಂಬಂತೆ ನಾನು ಅದನ್ನು ಗೌಪ್ಯವಾಗಿಡಬೇಕಂತೆ!! ಆದರೂ ನಾನು ಆ ಕೆಲಸವನ್ನೊಪ್ಪಿಕೊಂಡೆ, ನನ್ನ ಸಂಬಳವನ್ನು ಕೇವಲ ನನ್ನ ಸಹೋದ್ಯೋಗಗಳೊಂದಿಗಷ್ಟೇ ಅಲ್ಲ ಬೇರೆಯವರೊಂದಿಗೂ ಹೇಳಿಕೊಳ್ಳಲಿಲ್ಲ. ಅಷ್ಟು ಕಡಿಮೆ ಸಂಬಳ ಪಡೆಯುತ್ತಿದ್ದೇನೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿತ್ತು. ಸುಮಾರು ಒಂದೂವರೆ ವರ್ಷಗಳ ನಂತರ  ಇನ್ನೊಂದು ಶಾಲೆಗೆ ಸೇರಿದೆ. ಅಲ್ಲಿ ನನ್ನ ಸಂಬಳ ನಾಲ್ಕು ಸಾವಿರ ರೂಪಾಯಿ. ಈ ಶಾಲೆಯ ಸುಮಾರು ನಲವತ್ತು ಶಿಕ್ಷಕರ ಪೈಕಿ ನನ್ನ ಸಂಬಳವೇ ಅತಿ ಹೆಚ್ಚು! ಹಾಗೂ ಈ ವಿಷಯಕ್ಕಾಗಿ ಇತರ ಶಿಕ್ಷಕರು ನನ್ನ ಬಗ್ಗೆ ಅಸೂಯೆ ಪಟ್ಟುಕೊಂಡದ್ದಿದೆಯೆಂದರೆ ಅವರ ಸಂಬಳವೆಷ್ಟಿರಬೇಕು ಎಂಬುದನ್ನು ಊಹಿಸಿಕೊಳ್ಳಿ. ಇಂದು ಖಾಸಗಿ ಶಾಲೆಯ ಶಿಕ್ಷಕರು ಮನೆ ನಡೆಸಬೇಕಂದರೆ ಅನಿವಾರ್ಯವಾಗಿ ಪರ್ಯಾಯ ಆದಾಯದ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು. ಗಣಿತ ಹಾಗೂ ವಿಜ್ಞಾನ ಶಿಕ್ಷಕರು ಮನೆಪಾಠಗಳಿಗೆ ಮೊರೆ ಹೋದರೆ ಇತರ ವಿಷಯಗಳ ಶಿಕ್ಷಕರು ಬೇರಿನ್ನೇನೋ ವ್ಯವಹಾರವನ್ನು ನಡೆಸಲೇಬೇಕು.

 ನಾನು ಕೆಲಸ ಮಾಡಿದ ಈ ಶಾಲೆಗಳು ಸಣ್ಣವೇನಲ್ಲ ನನ್ನ ಜಿಲ್ಲೆಯಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳಷ್ಟು ಹಳೆಯ ಶಾಲೆಗಳಿವು. ಸಾಕಷ್ಟು ಹೆಸರು ಗಳಿಸಿವೆ. ಮೊದಲ ಶಾಲೆಯಂತೂ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಶಾಲೆಯ ಶುಲ್ಕ ಸುಮಾರು ಹತ್ತು ಸಾವಿರ ರೂಪಾಯಿ. ನರ್ಸರಿ ತರಗತಿಗಳಿಗೆ ಅವರು  ತೆಗೆದುಕೊಳ್ಳುವ ಡೊನೇಶನ್ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಗಳು. ಶಾಲೆಯ ಒಟ್ಟು  ವಾರ್ಷಿಕ ಆದಾಯ ನಾಲ್ಕು ಕೋಟಿಯನ್ನು ಮೀರುತ್ತದೆ. ಶಿಕ್ಷಕರ ಸಂಬಳ, ಸರ್ಕಾರಿ ಅಧಿಕಾರಿಗಳ ಗಿಂಬಳ, ಹಾಗೂ ಇತರೆ ಖರ್ಚುಗಳು ಒಂದೂವರೆ ಕೋಟಿಯನ್ನು ಮೀರುವುದಿಲ್ಲ. ಅಂದರೆ ವರ್ಷವೊಂದರಲ್ಲಿ ಸುಮಾರು ಎರಡುವರೆ ಕೋಟಿಯಷ್ಟು ನಿವ್ವಳ ಲಾಭ! ಇಂತಹ ಒಳ್ಳೇ ಲಾಭದಲ್ಲಿ ನಡೆಯುತ್ತಿರುವ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಹೀಗಿದ್ದರೆ ಇದಕ್ಕಿಂತ ಕಡಿಮೆ ಲಾಭ ಮಾಡುವ ಇತರ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಇನ್ನೂ ಹೇಗಿರಬಹುದೆಂದು ಊಹಿಸಿಕೊಳ್ಳಿ. ಲಕ್ಷಾಂತರ ಸಂಖ್ಯೆಯಲ್ಲಿ ದುಡಿಯುತ್ತಿರುವ ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಶೋಷಣೆಯಿಂದ ಮುಕ್ತಿ ಪಡೆಯಬೇಕೆಂದರೆ ಇರುವ ಮಾರ್ಗವೊಂದೇ- ಪ್ರವೇಶ ಪರೀಕ್ಷೆ ಬರೆದು ಸರಕಾರಿ ಶಾಲೆಯನ್ನು ಸೇರಿಕೊಳ್ಳುವುದು. ಸರಕಾರವಾದರೂ ಎಷ್ಟು ಜನರಿಗೆ ಕೆಲಸ ಕೊಟ್ಟೀತು?

ಇನ್ನು ಸರಕಾರಿ ಶಾಲೆಯ ಶಿಕ್ಷಕರ ಪರಿಸ್ಥಿತಿ ಆದಾಯದ ದೃಷ್ಟಿಯಿಂದ ಖಾಸಗಿ ಶಿಕ್ಷಕರಿಗಿಂತ  ತುಸು ಉತ್ತಮವಾದರೂ ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವಿದ್ಯಾವಂತರಿಗೆ ಹೋಲಿಸಿದರೆ ತೀರಾ ಕಡಿಮೆಯೆಂದೇ ಹೇಳಬಹುದು. ಸರಕಾರ ಪ್ರತೀ ಬಾರಿ ವೇತನದ ಪುನರ್ ಪರೀಶೀಲನೆ ಸಂದರ್ಭದಲ್ಲೂ ಶಿಕ್ಷಕರು ಬೀದಿಗಿಳಿದು ಹೆಚ್ಚಿನ ವೇತನಕ್ಕಾಗಿ ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿಯಿದೆ. ನನ್ನ ತಾಯಿ 33 ವರ್ಷ ಸತತವಾಗಿ ಸರಕಾರಿ ಶಾಲೆಯಲ್ಲಿ ದುಡಿದ ನಂತರ (ಇನ್ನೇನು ನಾಲ್ಕು ತಿಂಗಳಲ್ಲಿ ನಿವೃತ್ತಿ ಹೊಂದುತ್ತಾರೆ) ಬರುವ ವೇತನ ಇಪ್ಪತ್ತೈದು ಸಾವಿರವಷ್ಟೆ. ಆದರೆ ಈಗಷ್ಟೇ ಓದು ಮುಗಿಸಿ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರ  ಹುಡುಗ/ಹುಡುಗಿಯರ ವೇತನ 20 ರಿಂದ 60 ಸಾವಿರ ರೂಪಾಯಿಗಳು! ಶಿಕ್ಷಣ ವಲಯವು ಅನುತ್ಪಾದಕ ವಲಯವೆಂಬ  ಧೋರಣೆಯೇ ಈ ಅಸಮಾನತೆಗೆ ಮೂಲ ಕಾರಣ. ನಮ್ಮ ಪ್ರಧಾನಮಂತ್ರಿಗಳು, ವಿತ್ತ ಮಂತ್ರಿಗಳು, ಮುಖ್ಯಮಂತ್ರಿಗಳು ನಮ್ಮ ದೇಶ ಹಾಗೂ ರಾಜ್ಯಗಳು ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಯಾವ ಶ್ರೀಸಾಮಾನ್ಯನಿಗೂ ಅರ್ಥವಾಗದ ಅಂಕಿ ಅಂಶಗಳ ಮೂಲಕ ಪ್ರಸ್ತುತ ಪಡಿಸುತ್ತಾರೆ. ದೇಶವು ಆರ್ಥಿಕವಾಗಿ ಇನ್ನೂ ಸಬಲವಾಗಬೇಕೆಂದರೆ ನಮ್ಮ ನಾಗರಿಕರು ಸುಶಿಕ್ಷಿತರಾಗುವುದು ಅನಿವಾರ್ಯ ಎಂದೆಲ್ಲಾ ಭಾಷಣ ಬಿಗಿಯುತ್ತಾರೆ. ಆದರೆ ಬಜೆಟ್ ಮಂಡಿಸುವಾಗ ಇಂತಹ ಸುಶಿಕ್ಷಿತ ವರ್ಗವನ್ನು ಸೃಷ್ಟಿಸುವ ಶಿಕ್ಷಕರನ್ನೇ ಮರೆತು ಬಿಡುತ್ತಾರೆ. ಒಬ್ಬ ಶಾಲಾ ಶಿಕ್ಷಕ ಇತರ ವೃತ್ತಿಪರರಂತೆ ಕಾರಿನಲ್ಲಿ ಕೆಲಸಕ್ಕೆ ಹೋಗುವುದನ್ನು ಊಹಿಸಿಕೊಳ್ಳುವುದು ಅಸಾಧ್ಯವಷ್ಟೇ ಅಲ್ಲ ಅಪರಾಧ ಕೂಡ. ಯಾಕೆಂದರೆ ದೇಶ ಸೇವೆ, ನಿಸ್ವಾರ್ಥ ಸೇವೆ ಎಂಬ ಮೌಲ್ಯಗಳೆಲ್ಲಾ ಶಿಕ್ಷಕರಿಗಷ್ಟೇ ಮೀಸಲಿಟ್ಟಿವೆಯಲ್ಲವೇ. ಆರ್ಥಿಕ ಶೋಷಣೆಯ ಜೊತೆಗೆ ಶಾಲಾ ಆಡಳಿತದವರಿಂದ ಮಾನಸಿಕ ಹಿಂಸೆ, ವಿದ್ಯಾರ್ಥಿಗಳ ಉದ್ಧಟತನ ಹಾಗೂ ಪೋಷಕರ ದರ್ಪವನ್ನು ಬೋನಸ್ಸೆಂಬಂತೆ ಪಡೆಯಬೇಕು.

ದಿನೇ ದಿನೇ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿದೆ ಎಂದು ಜನ ಆಡಿಕೊಳ್ಳುವುದುಂಟು. ಇದರಲ್ಲಿ ಸತ್ಯವಿಲ್ಲದಿಲ್ಲ. ಇದನ್ನು ನಿವಾರಿಸಲು ಶಿಕ್ಷಣ ತಜ್ಞರು ಶಿಶು-ಕೇಂದ್ರಿತ ಬೋಧನಾ ವಿಧಾನಗಳ ಬಗ್ಗೆ , ಶಿಕ್ಷಣದಲ್ಲಿ ಮನೋವಿಜ್ಞಾದ ಪಾತ್ರ ಎಂಬ ವಿಷಯಗಳ ಬಗ್ಗೆ ತಾಸುಗಟ್ಟಲೆ ಕೊರೆದು, ಪುಟಗಟ್ಟಲೆ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಿಟ್ಟಿಸಿ ಬೀಗುತ್ತಾರೆ. ಈ ವಿಚಾರಗಳೆಲ್ಲ ಒಳ್ಳೆಯದೇ ಪ್ರಭುಗಳೇ, ಇವನ್ನು ಖಂಡಿತವಾಗಿ ಅನುಸರಿಸೋಣ. ಆದರೆ ಇಂತಹ ಉದಾತ್ತ ಬೋಧನಾ ವಿಧಾನಗಳನ್ನು, ತಿಂಗಳ ಕೊನೆಯಲ್ಲಿ ದಿನಸಿಗೆ ಹಣ ಹೇಗೆ ಹೊಂದಿಸಬೇಕೆಂಬ ಎಂಬ ಚಿಂತೆಯಲ್ಲಿ ಮುಳುಗಿದ ಶಿಕ್ಷಕನು ಅನುಷ್ಠಾನಗೊಳಿಸಲು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಸಿದ್ಧನಾಗಿದ್ದಾನೆಯೆ  ಎಂದು ನೀವ್ಯಾಕೆ ಯೋಚಿಸುವುದಿಲ್ಲ? ಶಿಕ್ಷಣದ ಗುಣಮಟ್ಟ ಕುಸಿಯಲು ಹಲವಾರು ಕಾರಣಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಒಳ್ಳೆಯ ಶಿಕ್ಷಕರು ದೊರೆಯುತ್ತಿಲ್ಲವೆನ್ನುವುದು, ಯುವ ವರ್ಗಕ್ಕೆ ಶಿಕ್ಷಣ ವೃತ್ತಿಯು ಇಂದು ಆಕರ್ಷಕ ವೃತ್ತಿಯಾಗಿ ಉಳಿದಿಲ್ಲವೆನ್ನುವುದು, ಬಿ.ಎಡ್, ಟಿಸಿಎಚ್ ಕೋರ್ಸುಗಳ ಗುಣಮಟ್ಟ ಕುಸಿದಿರುವುದು. ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ, ಲಂಚಕೋರತನ ಇತ್ಯಾದಿ ಇದಕ್ಕೆ ಕಾರಣವೆನ್ನಬಹುದು. ಇಂದು ಬುಧ್ಧಿವಂತ ಯುವಕ/ಯುವತಿಯರಾರೂ ಶಿಕ್ಷಣ ಕ್ಷೇತ್ರಕ್ಕೆ ಬರಲು ಇಷ್ಟ ಪಡುವುದಿಲ್ಲ. ಶಿಕ್ಷಕರಾಗಲು ಯಾರು ಬಯಸುತ್ತೀರಿ ಎಂದು ನಾನು ತರಗತಿಯೊಂದರ ಮಕ್ಕಳಿಗೆ ಪ್ರಶ್ನೆ ಕೇಳಿದಾಗ ಅಲ್ಲಿ ಕುಳಿತಿದ್ದ ಅರವತ್ತು ಮಕ್ಕಳಲ್ಲಿ  ಒಂದೋ ಎರಡೋ ಮಕ್ಕಳ ಕೈಗಳಷ್ಟೇ ಮೇಲೆದ್ದವು. ದಿನನಿತ್ಯ ಶಿಕ್ಷಕರ ಬವಣೆಯನ್ನು ಕಣ್ಣಾರೆ ನೋಡುವ ಅವರಿಗೆ ಶಿಕ್ಷಕರಾಗಲು ಪ್ರೇರಣೆಯಾದರೂ ಎಲ್ಲಿಂದ ಬರಬೇಕು ?  ಉತ್ತಮ ವೇತನ ದೊರೆತಲ್ಲಿ, ಶಿಕ್ಷಕರಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ವೃತ್ತಿಪರತೆ ಹೆಚ್ಚಿದಲ್ಲಿ, ಒಳ್ಳೆಯ ಶಿಕ್ಷಕರು ದೊರೆಯುವರೆಂಬುದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಚಿಂತಿಸುವವರಾದರೂ ಯಾರು?

ಶಿಕ್ಷಕನೊಬ್ಬ ಮಕ್ಕಳಿಗೆ ದಂಡಿಸಿದಾಗ ಅಥವಾ ನಿಂದಿಸಿದಾಗ ಆ ಸುದ್ದಿಯು ದೊಡ್ಡಮಟ್ಟದಲ್ಲಿ ಮಾಧ್ಯಮಗಳಲ್ಲಿ ವಿಜೃಂಭಿಸುತ್ತದೆ. ಇಂತಹ ಕೃತ್ಯಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಬಂದು ಅರವತ್ನಾಲ್ಕು ವರ್ಷ ಕಳೆದರೂ ನಮ್ಮ ದೇಶದ ಮೂರನೇ ದರ್ಜೆಯ (ಅಥವಾ ಅದಕ್ಕಿಂತಲೂ ಹೀನ?!) ನೌಕರರಂತೆ ಜೀವಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರ  ಬವಣೆಯ ಬಗ್ಗೆ ಯಾವ ಮಾಧ್ಯಮದವರಾದರೂ ಸೊಲ್ಲೆತ್ತಿದ್ದಾರೆಯೇ ? ತಮ್ಮ ಮಕ್ಕಳಿಗೆ ಒಂದು ಮಾರ್ಕು ಕಡಿಮೆ ಬಂದರೂ ಶಿಕಕ್ಷರನ್ನು ದೂಷಿಸುವ ಪೋಷಕರು ಅವರ ಮಕ್ಕಳ ಭವಿಷ್ಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರ ಸಂಕಷ್ಟಗಳ ಬಗ್ಗೆ ಒಂದು ಕ್ಷಣವಾದರೂ ಯೋಚಿಸುತ್ತಾರೆಯೇ? ವರುಷಕ್ಕೆ ಕೋಟಿಗಟ್ಟಲೆ ಎಣಿಸುವ ಶಾಲಾ ಆಡಳಿತದವರು ತಮಗೆ ಇಷ್ಟು ಲಾಭ ತಂದು ಕೊಟ್ಟ ಶಿಕ್ಷಕರು ಮೂರ್ನಾಲ್ಕು ಸಾವಿರಗಳಲ್ಲಿ ಹೇಗಾದರೂ ಜೀವನ ನಡೆಸುತ್ತಿರಬಹುದೆಂದು ಯೋಚಿಸುತ್ತಾರೆಯೆ ? ದಾರಿಯಲ್ಲಿ ತನ್ನ ಹಳೆಯ ಗುರುವು ಕಂಡಾಗ ಹೇಗಿದ್ದೀರ ಎಂದು ಸಹ ಮಾತನಾಡಿಸದೆ ಮುಖ ತಿರುಗಿಸಿಕೊಂಡು ಹೋಗುವ ಯುವಕರು ತನಗೆ ತನ್ನ ಸಂಬಳ ಎಣಿಸಲು ಸಾಧ್ಯವಾಗಿರುವುದು ಇವರು ನನಗೆ ಲೆಖ್ಖ ಹೇಳಿಕೊಟ್ಟಿದ್ದರಿಂದಲೇ ಅಲ್ಲವೆ ಎಂದು  ಯೋಚಿಸುತ್ತಾರೆಯೇ?

 ಓ ಕೃತಘ್ನ ಸಮಾಜವೇ… ಶಿಕ್ಷಕರ ದಿನಾಚರಣೆಯಂದು “ಶಿಕ್ಷಕ ವೃತ್ತಿ ಮಹಾನ್ ವೃತ್ತಿ…” ಅಂತೆಲ್ಲಾ ತೌಡು ಕುಟ್ಟಿದ್ದು ಸಾಕು, ಇಂದು ನಿಮ್ಮ “ಹ್ಯಾಪೀ ಟೀಚರ್ಸ್ ಡೇ” ಎಂಬ ಅರ್ಥ ಕಳೆದುಕೊಂಡ ಶುಭಾಶಯ ನಮ್ಮಲ್ಲಿ ಯಾವುದೇ  ಭಾವನೆಗಳನ್ನು ಸ್ಫುರಿಸುವುದಿಲ್ಲ, “..ಗುರುಬ್ರಹ್ಮ, ಗುರು ವಿಷ್ಣು, ಗುರು ದೇವೋ… ಮಹೇಶ್ವರಃ…” ಅಂತೆಲ್ಲಾ ಹೇಳಿ ನಮ್ಮ ಕಿವಿಯ ಮೇಲೆ ಹೂ  ಇಡುವುದನ್ನು ಈಗಲಾದರೂ ನಿಲ್ಲಿಸಿ. ನೀವು ಇವೇನನ್ನು ಮಾಡದಿದ್ದರೂ ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವಷ್ಟು ‘ವೃತ್ತಿ-ಅಭಿಮಾನ’ ನಮ್ಮಲ್ಲಿ ಇನ್ನೂ ಉಳಿಸಿಕೊಂಡಿದ್ದೇವೆ ಹಾಗೂ ಉಳಿಸಿಕೊಂಡಿರುತ್ತೇವೆ. ನಾವೇನೂ ಮಹಾನ್ ವ್ಯಕ್ತಿಗಳಲ್ಲ, ನಮಗೂ ಇತರರಂತೆ ಭೌತಿಕ ಅವಶ್ಯಕತೆಗಳಿರುತ್ತವೆ, ಆಸೆ-ಆಕಾಂಕ್ಷೆಗಳಿರುತ್ತವೆ. ಇವೆಲ್ಲಾ ನಿಮ್ಮ ಬಣ್ಣ-ಬಣ್ಣದ ಮಾತುಗಳಿಂದ ದೊರೆಯುವುದಿಲ್ಲ. ಇದಕ್ಕೆ ಒಳ್ಳೆಯ ಸಂಬಳ ಬೇಕು…. ಹಲೋ… ಕೇಳುತ್ತಿದೆಯಾ????

Monday, February 14, 2011

ಕಳೆದುಹೋದ ಅದ್ಭುತ ನಾಗರಿಕತೆ ಅಲೆಕ್ಸಾಂಡ್ರಿಯಾ…


ಮಗೆಲ್ಲರಿಗೂ ಗೊತ್ತಿರುವ ಹಾಗೆ ಇತಿಹಾಸದ ಪುಟಗಳಲ್ಲಿ ಕೋಪರ್ನಿಕಸ್ ನನ್ನು ವೈಜ್ಞಾನಿಕ ಕ್ರಾಂತಿಯ ಹರಿಕಾರನೆಂದೇ ಬಣ್ಣಿಸಲಾಗಿದೆ. ಇದು ಉತ್ಪ್ರೇಕ್ಷೆಯಂತೂ ಅಲ್ಲ.ಸಹಸ್ರಾರು ವರ್ಷಗಳ ತನಕ ಮಾನವ ಭೂಮಿಯನ್ನು ವಿಶ್ವದ ಕೇಂದ್ರದಲ್ಲಿರಿಸಿ ತನಗಾಗಿ ಈ ವಿಶ್ವದಲ್ಲಿ ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಂಡಿದ್ದ. ಈ ನಂಬಿಕೆಯು ಹಲವಾರು ಧರ್ಮಗಳಿಗೆ ಹಾಗೂ ಮಾನವಕೇಂದ್ರಿತ ತತ್ವಶಾಸ್ತ್ರಜ್ಞರಿಗೆ ಬಲಕೊಟ್ಟಿದ್ದಿತು. ಈ ನಂಬಿಕೆಗೆ ಬಲವಾದ ಪೆಟ್ಟು ಕೊಟ್ಟಿದ್ದು ಕೋಪರ್ನಿಕಸ್ ನ ಸೂರ್ಯ-ಕೇಂದ್ರಿತ ಸಿದ್ಧಾಂತ. ಸುಧೀರ್ಘವಾದ ಅಂಧಕಾರ ಯುಗದ ನಂತರ ಮೊದಲಬಾರಿಗೆ ಮಾನವ ಪ್ರಚಲಿತ ಹಾಗೂ ಆಡಳಿತ ವರ್ಗದಿಂದ ಬೆಂಬಲಿತ ನಂಬಿಕೆಗಳನ್ನು ಪ್ರಶ್ನಿಸತೊಡಗಿದ. ಆ ನಂತರ ನಡೆದ ಬೆಳವಣಿಗೆಯನ್ನು ಒಂದು ಜ್ಞಾನ-ಸ್ಫೋಟವೆಂದೇ ಕರೆಯಬಹುದು.ಕೇವಲ ವೈಜ್ಞಾನಿಕ ಕ್ಷೇತ್ರವೊಂದೇ ಅಲ್ಲ ಇನ್ನಿತರ ರಂಗಗಳಾದ ಕಲೆ, ರಾಜಕೀಯ,ಆಧ್ಯಾತ್ಮ,ಕೈಗಾರಿಕೆ,ವಾಣಿಜ್ಯ ವಿಷಯಗಳಲ್ಲೂ ಕ್ರಾಂತಿಯುಂಟಾಯಿತು. ಒಂದು ರೀತಿಯಲ್ಲಿ ಮನುಕುಲ ಜ್ಞಾನದ ಒಳಹರಿವಿಗೆ ಮುಕ್ತಮನಸ್ಸಿನಿಂದ ಬಾಗಿಲು ತೆರೆದುಕೊಂಡಿತು. ಇಂದಿನ ಹಾಗೂ ಮುಂಬರುವ ಪೀಳಿಗೆಗಳು ಈ ಕ್ರಾಂತಿಯುಗವನ್ನು ಮನುಕುಲದ ಸ್ವರ್ಣಯುಗವೆಂದು ಕರೆದರೆ ಅತಿಶಯೋಕ್ತಿಯಾಗುವುದಿಲ್ಲ. ನಾವು ಎಂದೆಂದಿಗೂ ಈ ಕ್ರಾಂತಿಗೆ ಕಾರಣಕರ್ತರಾದವರಿಗೆ ಚಿರಋಣಿಯಾಗಿರಬೇಕಾಗಿರುತ್ತದೆ.

ಈಗ ನಾನು ಹೇಳಹೊರಟಿರುವುದು ಈ ಕ್ರಾಂತಿ ಯುಗದ ಭವ್ಯ ಇತಿಹಾಸವನ್ನಲ್ಲ ಆದರೆ ಈ ಯುಗದ ಎಲ್ಲಾ ಶ್ರೇಷ್ಠ ಗುಣಲಕ್ಷಣಗಳಿದ್ದ, ಕಾಲ-ಗರ್ಭದಲ್ಲಿ ಹುದುಗಿಹೋದ ಭವ್ಯ ನಾಗರಿಕತೆಯ ಬಗ್ಗೆ. ಒಂದು ವೇಳೆ ಈ ನಾಗರೀಕತೆಯು ಧರ್ಮ ಹಾಗೂ ರಾಜಕೀಯ ಯುದ್ಧಗಳ ನಡುವೆ ಪದೇ-ಪದೇ ಸಿಲುಕದೇ ಹೋಗಿದ್ದಿದ್ದರೆ ನಮಗೆ ‘ಕೋಪರ್ನಿಕಸ್-ಕ್ರಾಂತಿ’ಯವರೆಗೂ ಕಾಯುವ ಪ್ರಮೇಯವೆ ಬರುತ್ತಿರಲಿಲ್ಲವೇನೋ ಅನಿಸುತ್ತದೆ. ಮನಸ್ಸಿನಲ್ಲಿ ಈ "ರೆ" ಹೊಂದಿದ ಪದಗಳು ಮೂಡದೇ ಇತಿಹಾಸವನ್ನು ಓದುವುದು ಬಹುಶಃ ಕಷ್ಟವಾಗಬಹುದು.

ನಮ್ಮಲ್ಲಿ ಗ್ರೀಕ್ ದೊರೆ ಅಲೆಕ್ಸಾಂಡರನ ಹೆಸರು ಕೇಳದಿರುವವರು ತುಂಬಾ ವಿರಳ. ಜಗತ್ತಿನೆಲ್ಲೆಡೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂದು ಬಯಸಿದ ಮೊದಲ ಚಕ್ರವರ್ತಿಯವನು. ಅಲೆಕ್ಸಾಂಡರ್ ಕೇವಲ ತನ್ನ ಇದೊಂದೇ ಮಹತ್ವಕಾಂಕ್ಷೆಗಾಗಿ ಹೆಸರುವಾಸಿಯಾಗಲಿಲ್ಲ. ಗ್ರೀಕ್ ಸಾಮ್ರಾಜ್ಯದ  ಸಾಂಸ್ಕೃತಿಕ ಹಾಗೂ ಭೌದ್ದಿಕ ಬೆಳವಣಿಗೆಗೆ ಅವನು ಅವಕ್ಕೆ ನೀಡಿದ ಉತ್ತೇಜನವೂ ಒಂದು  ಕಾರಣವೆಂದು ಹೇಳಬಹುದು. ಅಲೆಕ್ಸಾಂಡರ್ ಅಂದಿನ ಮಹಾನ್ ತತ್ವಜ್ಞಾನಿ ಅರಿಸ್ಟಾಟಲನ ಶಿಷ್ಯನಾಗಿದ್ದರಿಂದ ಸಹಜವಾಗಿಯೆ ಅವನಿಗೆ ಸಾಂಸ್ಕೃತಿಕ ಮತ್ತು ಇತರ ಶಾಸ್ತ್ರಗಳೆಡೆಗೆ ಆಸಕ್ತಿಯಿದ್ದಿತು. ತನ್ನ ರಾಜ್ಯದಲ್ಲಿ ವಿವಿಧ ದೇಶಗಳ ಸಂಸ್ಕೃತಿಗಳನ್ನು ಮತ್ತು ಗಣಿತಶಾಸ್ತ್ರ, ಖಗೋಳಶಾಸ್ತ್ರ,ವೈದ್ಯಶಾಸ್ತ್ರ ಗಳಂತಹ ವಿವಿಧ ಶಾಸ್ತ್ರಗಳನ್ನು ಕಲಿಯಲು ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿದ. ಅಲೆಕ್ಸಾಂಡರ್ ಕ್ರಿ.ಪೂ.300 ರ ಆಸುಪಾಸಿನಲ್ಲಿ ಈಗಿನ ಈಜಿಪ್ಟಿನ ಬಂದರಿಗೆ ಭೇಟಿ ಕೊಡುತ್ತಾನೆ. ಮೆಡಿಟರೇನಿಯನ್ ಸಮುದ್ರಕ್ಕೆ ಅಂಟಿಕೊಂಡಿರುವ ಈ ಸ್ಥಳವು ಎಲ್ಲಾ ರೀತಿಯಿಂದಲೂ ಒಂದು ಉತ್ತಮ ನಗರವಾಗಬಹುದೆಂಬುದನ್ನು ಮನಗಂಡು ತನ್ನ ಆಡಳಿತಾಧಿಕಾರಿ ಕ್ಲಿಯೋಮೆನೆಸ್ ಗೆ ನಗರ ಕಟ್ಟುವ ಜವಾಬ್ದಾರಿವಹಿಸಿ ಹಿಂತಿರುಗುತ್ತಾನೆ.

ಅಲೆಕ್ಸಾಂಡರನ ಮರಣದ ನಂತರ ಅವನ ಸಾಮ್ರಾಜ್ಯವು ಅವನ ನಿಕಟವರ್ತಿ ಸೈನ್ಯಾಧಿಕಾರಿಗಳ ನಡುವೆ ಮೂರು ಭಾಗಗಳಾಗಿ ಹಂಚಿ ಹೋಗುತ್ತದೆ. ಆಗ ಈಜಿಪ್ಟಿನ ಈ ಹೊಸ ನಗರವನ್ನು, ಅಲೆಕ್ಸಾಂಡರನಿಗೆ ಅತ್ಯಂತ ನಿಕಟವರ್ತಿಯಾದ, ಟೋಲೆಮಿ-೧ ಸೋಟರ್ ಎಂಬ ಸೈನ್ಯಾಧಿಕಾರಿ ವಶಪಡಿಸಿಕೊಳ್ಳುತ್ತಾನೆ. ಅಲೆಕ್ಸಾಂಡರ್ ನ  ನೆನಪಿಗಾಗಿ ಈ ಪಟ್ಟಣಕ್ಕೆ "ಆಲೆಕ್ಸಾಂಡ್ರಿಯಾ" ಎಂಬ ಹೆಸರನ್ನಿಡಲಾಗುತ್ತದೆ. ಆ ಕಾಲದಲ್ಲಿ ಆಚರಣೆಯಲ್ಲಿದ್ದ ಊಳಿಗಮಾನ್ಯ ಪದ್ದತಿಯೊಂದನ್ನು ಹೊರತುಪಡಿಸಿದರೆ ಬೇರೆಲ್ಲಾ ದೃಷ್ಟಿಯಿಂದಲೂ ಇದೊಂದು ಶ್ರೇಷ್ಠ ಪಟ್ಟಣವಾಗಿದ್ದಿತು. ಈ ಪಟ್ಟಣವು ಉತ್ತಮ ಬಂದರುಗಳನ್ನು ಹೊಂದಿದ್ದರಿಂದ ಇತರ ದೇಶಗಳೊಂದಿಗೆ ಉತ್ತಮ ಸಾಂಸ್ಕೃತಿಕ ಹಾಗೂ ವಾಣಿಜ್ಯ ಸಂಬಂಧ ಬೆಳೆಸಲು ಅನುಕೂಲವಾಯಿತು. ಅಲೆಕ್ಸಾಂಡ್ರಿಯಾ ಪಟ್ಟಣ ಸದಾ ಯಾತ್ರಿಕರಿಂದ ಗಿಜಿಗುಡುತ್ತಿತ್ತು, ಇತರ ದೇಶಗಳಿಂದ ಭೇಟಿಗೆಂದು ಬಂದ ಅನೇಕರು ಇಲ್ಲಿನ ಭವ್ಯತೆಗೆ ಮಾರುಹೋಗಿ ಅಲ್ಲಿಯೇ ಶಾಶ್ವತವಾಗಿ ನೆಲಸಿದ್ದರು. ಹಾಗಾಗಿ ಈ ಪಟ್ಟಣವು ಸಾಂಸ್ಕೃತಿಕ ವೈವಿಧ್ಯದಿಂದ ಕೂಡಿತ್ತು. ವಿವಿಧ ಜನಾಂಗ ಹಾಗೂ ಧರ್ಮಕ್ಕೆ ಸೇರಿದ ಜನರು ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದ್ದರು. ಅಮೃತ ಶಿಲೆಗಳಿಂದ ಕಟ್ಟಿದ ಬೃಹತ್ ಕಟ್ಟಡಗಳು, ಅಗಲವಾದ ಹೆದ್ದಾರಿಗಳು, ಉದ್ಯಾನವನಗಳು, ಕಾರಂಜಿಗಳು ಹಾಗೂ ಇಂದಿಗೂ ಕಾಣಸಿಗುವ ಲೈಟ್ ಹೌಸ್ ಸಹಜವಾಗಿಯೇ ಇತರ ದೇಶಗಳು ಅಲೆಕ್ಸಾಂಡ್ರಿಯಾವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದವು.

ಇತಿಹಾಸಕಾರರನ್ನು ಅಲೆಕ್ಸಾಂಡ್ರಿಯಾ ಆಕರ್ಷಿಸುವುದು ಇವಿಷ್ಟೇ ಕಾರಣಗಳಿಗಲ್ಲ, ಬದಲಿಗೆ ಜ್ಞಾನಾರ್ಜನೆಗೆ ಅವರು ನೀಡಿದ ಪ್ರಾಶಸ್ತ್ಯ ಮತ್ತು ಅವರ ಬೌದ್ಧಿಕ ಸಾಧನೆಗಳಿಗಾಗಿ. ಟೋಲೆಮಿ- ೧ ನ ಆಡಾಳಿತಾವಧಿಯಲ್ಲಿ ಕಲೆ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳ ಅಧ್ಯಯನಕ್ಕೆ ವಿಶಿಷ್ಟ ಪ್ರೋತ್ಸಾಹ ದೊರಕಿತು. ಇವುಗಳ ಅಧ್ಯಯನಕ್ಕಾಗಿಯೆಂದೇ ತನ್ನ ಅರಮನೆ ಆವರಣದಲ್ಲಿಯೇ ‘The Musaeum’ ಅನ್ನು ಸ್ಥಾಪಿಸಿದ, ಇದಕ್ಕೆ ಈ ಹೆಸರು ಗ್ರೀಕ್ ಸಂಸ್ಕೃತಿಯ ಒಂಬತ್ತು ಜ್ಞಾನ ದೇವತೆಗಳಾದ ‘The Nine Muses’ ನಿಂದಾಗಿ ಬಂದದ್ದು. ಇಂದಿನ ಅರ್ಥದಲ್ಲಿ ಇದನ್ನು ಒಂದು ವಿಶ್ವವಿದ್ಯಾಲಯ ಎಂದು ಕರೆಯಬಹುದು. ಈ ವಿದ್ಯಾಲಯವು, ಅದಕ್ಕಂಟಿಕೊಂಡ The Nine Muses ದೇವಸ್ಥಾನದ ಜೊತೆಗೆ, ವಿವಿಧ ಶಾಸ್ತ್ರಗಳ ಅಧ್ಯಯನಕ್ಕೆಂದು ಹತ್ತು ವಿಶಾಲ ಕೋಣೆಗಳನ್ನು ಹೊಂದಿತ್ತು. ಇಲ್ಲಿ ಸಾಹಿತ್ಯ, ಕಲೆ, ಗಣಿತ, ಖಗೋಳ ಶಾಸ್ತ್ರ, ವೈದ್ಯ ಶಾಸ್ತ್ರ, ಜೀವಶಾಸ್ತ್ರಗಳ ಅಧ್ಯಯನ ನಡೆಯುತ್ತಿತ್ತು. ಹಾಗೂ ಪ್ರತೀ ವಿಭಾಗಕ್ಕೂ ಪ್ರತ್ಯೇಕ ಕೊಠಡಿಗಳನ್ನು ನಿಗದಿಪಡಿಸಲಾಗಿತ್ತು. ಇಲ್ಲಿ ಸಸ್ಯಶಾಸ್ತ್ರದ ಅಧ್ಯಯನಕ್ಕೆಂದು  Botanical garden  ಹಾಗೂ ಮಾನವನ ದೇಹ ರಚನೆಯನ್ನು ಅಭ್ಯಸಿಸಲು  Dissection Hall ನ ವ್ಯವಸ್ಥೆಯೂ ಇತ್ತೆನ್ನಲಾಗಿದೆ.

ಟೋಲೆಮಿ-ನ ನಂತರ ಅವನ ಮಗ ಟೊಲೆಮಿ-೨ ‘ಫಿಲಡೆಲ್ಫಸ್’  ತನ್ನ ತಂದೆಯ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಷ್ಟೇ ಅಲ್ಲದೆ ಈ ವಿದ್ಯಾಲಯಕ್ಕೆ ಹೊಂದಿಕೊಂಡಂತೆ ಒಂದು ಬೃಹತ್ ಗ್ರಂಥಾಲಯವನ್ನೂ ಕಟ್ಟಿಸಿದ. ಈ ಗ್ರಂಥಾಲಯದಲ್ಲಿ ಸುಮಾರು ಎರಡರಿಂದ ಐದು ಲಕ್ಷದಷ್ಟು ಪುಸ್ತಕಗಳ ಸಂಗ್ರಹವಿತ್ತೆಂದು ಇತಿಹಾಸಕಾರರು ಹೇಳುತ್ತಾರೆ! ಇದನ್ನು ಯಾವುದೇ ಸಮಕಾಲೀನ ಗ್ರಂಥಾಲಯಗಳಿಗೆ ಹೋಲಿಸಿದರೆ ಸುಮಾರು ಹತ್ತರಿಂದ ಮೂವತ್ತು ಪಟ್ಟು ದೊಡ್ಡದಾಗಿತ್ತು ಎಂದು ಹೇಳಬಹುದು. ಎಲ್ಲಾ ಪುಸ್ತಕಗಳನ್ನು ಪ್ಯಾಪೈರಸ್ ಎಲೆಗಳ ಮೇಲೆ ಬರೆಯಲಾಗುತ್ತಿತ್ತು.

ಇಷ್ಟು ದೊಡ್ಡ ಜ್ಞಾನ ಭಂಡಾರ ಈ ಗ್ರಂಥಾಲಯದಲ್ಲಿ ಸಂಗ್ರಹವಾದುದರ ಹಿಂದಿನ ಕಾರಣವೇ ಸ್ವಾರಸ್ಯಕರವಾಗಿದೆ. ಮೊದಲೇ ಹೇಳಿದಹಾಗೆ ಅಲೆಕ್ಸಾಂಡ್ರಿಯಾಕ್ಕೆ ಹಲವಾರು ದೇಶಗಳಿಂದ ಯಾತ್ರಿಕರು, ವ್ಯಾಪಾರಸ್ತರು ಭೇಟಿಕೊಡುತ್ತಿದ್ದರು. ಹೀಗೆ ಭೇಟಿಕೊಟ್ಟ ಪ್ರತಿಯೊಂದು ಹಡಗನ್ನು ಹಾಗೂ ಪ್ರವಾಸಿಗಳನ್ನು ಅಲ್ಲಿನ ಸೈನಿಕರು ಕೂಲಂಕಷವಾಗಿ ತಪಾಸಣೆಗೊಳಪಡಿಸುತ್ತಿದ್ದರು. ಆವರ ಬಳಿ ಯಾವುದೇ ಪುಸ್ತಕ ದೊರೆತರೂ ಅದನ್ನು ಮುಟ್ಟುಗೋಲು ಹಾಕಿಕೊಂಡು ಗ್ರಂಥಾಲಯದ ಅಧಿಕಾರಿಗಳಿಗೆ ಒಪ್ಪಿಸಿಬಿಡುತ್ತಿದ್ದರು. ಗ್ರಂಥಾಲಯದವರು ಆ ಪುಸ್ತಕಗಳ ಪ್ರತಿಗಳನ್ನು ತಯಾರಿಸಿ, ಅವುಗಳನ್ನು ಅದರ ಮಾಲೀಕರಿಗೆ ಹಿಂತಿರುಗಿಸಿ, ಮೂಲ ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಇದು ಅವರ ಜ್ಞಾನ ದಾಹ ಎಂಥದಿತ್ತು ಎಂಬುದನ್ನು ತೋರಿಸುತ್ತದೆ. ಹೀಗೆ ಅಲೆಕ್ಸಾಂಡ್ರಿಯಾದ  The Royal Library ಯಲ್ಲಿ ಇಡೀ ವಿಶ್ವದ ಜ್ಞಾನ-ಭಂಡಾರವೇ ಸಂಗ್ರಹಗೊಂಡಿತ್ತು ಎಂದು ಹೇಳಬಹುದು.

ಈ ಲೈಬ್ರರಿಗಾಗಿ ಎರಾಟೋಸ್ತಿನಿಸ್, ಅಪೊಲೋನಿಯಸ್, ಅರಿಸ್ಟಾರ್ಕಸ್ ರಂತಹ ಮೇಧಾವಿಗಳು ಕೆಲಸ ಮಾಡಿದರು. ಟೋಲೆಮಿ ವಂಶದ ಆಡಳಿತಾವಧಿಯಲ್ಲಿ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳು ನಿಜಕ್ಕೂ ಅದ್ಭುತ. ಉದಾಹರಣೆಗೆ ಏರಾಟೋಸ್ತಿನೀಸ್ - ಭೂಮಿಯ ಮೇಲೆ ಸೂರ್ಯನ ಬೆಳಕು ಉಂಟುಮಾಡುವ ನೆರಳುಗಳನ್ನು ಅಳೆದೇ ಭೂಮಿಯ ಸುತ್ತಳತೆಯನ್ನು ನಿಖರವಾಗಿ ಕಂಡುಹಿಡಿದಿದ್ದ! ಹೆರೋಫೈಲಸ್ ಎಂಬ ವೈದ್ಯ- ಅಲ್ಲಿಯವರೆಗೂ ಜನ ನಂಬಿಕೊಂಡು ಬಂದಿದ್ದರ ತದ್ವಿರುದ್ಧವಾಗಿ “ಮನುಷ್ಯನ ಬುದ್ಡಿ ಹೃದಯದಲ್ಲಲ್ಲ ಮಿದುಳಲ್ಲಿದೆ” ಎಂದು ಪ್ರತಿಪಾದಿಸಿದ. ಅಪೊಲೋನಿಯಸ್ ಎಂಬ ಗಣಿತಜ್ಞ ನಾವು ಇಂದಿಗೂ ಶಾಲೆಯಲ್ಲಿ ಗಣಿತದಲ್ಲಿ ಕಲಿಯುವ  conic  sections (Hyperbola, Parabola, Ellipse)  ಗಳನ್ನು ಕಂಡುಹಿಡಿದ. ಯೂಕ್ಲಿಡ್ ಎಂಬ ಗಣಿತಜ್ಞ ರೇಖಾಗಣಿತವನ್ನು ಶಾಸ್ತ್ರಬದ್ಧಗೊಳಿಸಿದ. ಸೂರ್ಯಕೇಂದ್ರಿತ ಸಿದ್ಧಾಂತವನ್ನು ಮೊದಲ ಬಾರಿಗೆ ಪ್ರತಿಪಾಸಿದ ವ್ಯಕ್ತಿ ಕೋಪರ್ನಿಕಸನಲ್ಲ, ಬದಲಿಗೆ ಇದೇ ಅಲೆಕ್ಸಾಂಡ್ರಿಯಾದ ಅರಿಸ್ಟಾರ್ಕಸ್ ಎಂಬ ಗಣಿತಜ್ಞ ಎಂದು ತಿಳಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಅರಿಸ್ಟಾರ್ಕಸ್ ನ ಈ ವಾದದ ಬಗ್ಗೆ ಅರ್ಕೆಮಿಡೀಸನು ತನ್ನ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾನೆ.

ಸುಮಾರು ಎರಡರಿಂದ ಐದು ಲಕ್ಷಗಳಷ್ಟು ಪುಸ್ತಕಗಳನ್ನು ಹೊಂದಿದ್ದ ಅಲೆಕ್ಸಾಂಡ್ರಿಯಾದ ಲೈಬ್ರರಿಯು ಯುದ್ಧದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾಯಿತು. ಅದು ಜೂಲಿಯಸ್ ಸೀಜರನ ಕಾಲ. ರೋಮಿನ ಅಧಿಪತ್ಯಕ್ಕಾಗಿ ಸೀಜರ್ ಮತ್ತು ಪಾಂಪೆಯ್ ನಡುವೆ ಯುದ್ಧವಾಯಿತು. ಸೀಜರನ ಬಲ ಹೆಚ್ಚಾದಾಗ ಪಾಂಪೆಯ್ ಅಲ್ಲಿಂದ ಓಡಿಹೋಗಿ ಅಲೆಕ್ಸಾಂಡ್ರಿಯಾದಲ್ಲಿ ರಾಜಕೀಯ ಆಶ್ರಯ ಪಡೆದ. ಅವನನ್ನಟ್ಟಿಸಿಕೊಂಡು ಬಂದ ಸೀಜರ್ ಅಲೆಕ್ಸಾಂಡ್ರಿಯಾದ ಪ್ರತಿರೋಧವನ್ನೆದುರಿಸಬೇಕಾಯಿತು. ಈ ಯುದ್ಧದ ಸಂದರ್ಭದಲ್ಲಿ ಸೀಜರ್ ತನ್ನ ಹಡಗುಗಳಿಗೇ ಬೆಂಕಿ ಹಚ್ಚಿ ಅಲೆಕ್ಸಾಂಡ್ರಿಯಾದ ಬಂದರಿಗೆ ನುಗ್ಗಿಸಿದ. ಅಪಾರ ಉರುವಲು ಪದಾರ್ಥ ಹೊತ್ತ ಹಡಗುಗಳು ಬಂದರಿಗಪ್ಪಳಿಸಿದಾಗ ಬಂದರಿಗೆ ಸಮೀಪವಿರುವ ಎಲ್ಲಾ ಕಟ್ಟಡಗಳಿಗೂ ಬೆಂಕಿ ಹತ್ತಿಕೊಂಡಿತು. ಬಂದರಿನ ಸಮೀಪವೇ ಇದ್ದ ಲೈಬ್ರರಿ, ಅರಮನೆ, ಹಾಗೂ ವಿದ್ಯಾಕೇಂದ್ರಗಳೆಲ್ಲವೂ ಬೆಂಕಿಗಾಹುತಿಯಾಯಿತು. ಎರಡು ಶತಮಾನಗಳವರೆಗೂ ನಿರಂತರವಾಗಿ ಸಂಗ್ರಹವಾಗಿದ್ದ ಜ್ಞಾನ-ಭಂಡಾರ ಕ್ಷಣ ಮಾತ್ರದಲ್ಲಿ ಬೂದಿಯ ರಾಶಿಯಾಗಿ ಬಿದ್ದಿತ್ತು. ಒಂದು ವೇಳೆ ನಮಗೆ ಈ ಪುಸ್ತಕಗಳೆಲ್ಲವು ದೊರೆತಿದ್ದರೆ ಇಂದು ನಾವು ಶಾಲೆಗಳಲ್ಲಿ ಓದುವ ಇತಿಹಾಸವೇ ಬೇರೆಯಾಗಿರುತ್ತಿತ್ತೇನೋ ಅನಿಸುತ್ತದೆ.

ಅಲೆಕ್ಸಾಂಡ್ರಿಯಾದಲ್ಲಿದ್ದದ್ದು ಕೇವಲ ಇದೊಂದೇ ಲೈಬ್ರರಿಯಲ್ಲ.  ಕ್ರಿ.ಪೂ. ಒಂದನೇ ಶತಮಾನದ ದ್ವಿತೀಯಾರ್ಧದಲ್ಲಿ, ಗ್ರೀಕರ ಸೆರಾಪಿಸ್ ದೇವತೆಯ ದೇವಸ್ಥಾನವಾದ ಸೆರಾಪಿಯಂ ನಲ್ಲಿ, ಇನ್ನೊಂದು ಮರಿ ಲೈಬ್ರರಿಯಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಸಾಮಾನ್ಯವಾಗಿ ಇದನ್ನು The Daughter Library ಎಂದೇ ಕರೆಯಲಾಗುತ್ತದೆ. ಇಲ್ಲಿ ಎರಡು ಲಕ್ಷ ಪುಸ್ತಕಗಳಿದ್ದಿರಬಹುದು ಎಂದು ಕೆಲವರು ಹೇಳುತ್ತಾರೆ. ಈ ಲೈಬ್ರರಿಗಾಗಿ ಸೀಜರ್ ನ ಸೈನ್ಯಾಧಿಕಾರಿ ಅಂಟೋನಿಯೋ ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾಗೆ ಎರಡು ಲಕ್ಷ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದ್ದ ಎಂಬ ದಂತ ಕಥೆಯೂ ಇದೆ. ಆದರೆ ಈ ಕಥೆಯಲ್ಲಿ ಎಳ್ಳಷ್ಟೂ ಹುರುಳಿಲ್ಲ, ಇಲ್ಲಿ ಅಷ್ಟು ಪುಸ್ತಕಗಳು ಹಿಡಿಸುವಷ್ಟು ಸ್ಥಳವಿರಲಿಲ್ಲ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಹೆಚ್ಚೆಂದರೆ ಈ ಲೈಬ್ರರಿಯಲ್ಲಿ ನಲವತ್ತು ಸಾವಿರದಷ್ಟು ಪುಸ್ತಕಗಳಿರಬಹುದು ಎಂದು ಹೇಳುತ್ತಾರೆ. ಈ ಸಂಖ್ಯೆಯೂ, ಜಗತ್ತಿನ ಅಂದಿನ ಇತರ ಲೈಬ್ರರಿಗಳಿಗೆ ಹೋಲಿಸಿದರೆ, ಆಗಿನ ಅತಿ ದೊಡ್ಡ ಲೈಬ್ರರಿಯಾಗಿತ್ತೆಂದೇ ಹೇಳಬಹುದು. ಈ ಲೈಬ್ರರಿ ಸುಮಾರು ಕ್ರಿ.ಶ. ೩೬೦ ರ ವರೆಗೂ ಅಸ್ತಿತ್ವದಲ್ಲಿತ್ತು. ಆ ಕಾಲದ ಹೆಸರಾಂತ ತತ್ವಶಾಸ್ತ್ರಜ್ಞೆ ಹೈಪೇಶಿಯ ಎಂಬ ಮಹಿಳೆಯು ಸೆರಾಪಿಯಂ ಲೈಬ್ರರಿಯ ಕೊನೆಯ ಅಧಿಕಾರಿಯಗಿ ಕಾರ್ಯ ನಿರ್ವಹಿಸಿದಳು. ಗಣಿತ, ತತ್ವಶಾಸ್ತ್ರ, ಹಾಗೂ ಖಗೋಳಶಾಸ್ತ್ರಗಳಂತಹ ವಿಷಯಗಳಲ್ಲಿ ಪಾರಂಗತಳಾಗಿದ್ದಳು. ಅವಳ ಪ್ರವಚನಗಳನ್ನು ಕೇಳಲು ದೂರದ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ತನ್ನ ಬುದ್ಧಿವಂತಿಕೆ, ಸೌಂದರ್ಯ ಮತ್ತು ಧೈರ್ಯಗಳಿಗೆ ಪ್ರಸಿದ್ಧಿ ಪಡೆದಿದ್ದಳು.
      
    
ಈ ಲೈಬ್ರರಿಯ ಅಂತ್ಯದ ಕಥೆಯಂತೂ ಅತ್ಯಂತ ದಾರುಣವಾಗಿದೆ. ಆಗಿನ ರೋಮ್ ಚಕ್ರವರ್ತಿ ಥಿಯೋಡೋಸಿಯಸ್ ಕ್ರೈಸ್ತ ಧರ್ಮವನ್ನು ತನ್ನ ರಾಜ್ಯದ ಅಧಿಕೃತ ಧರ್ಮವನ್ನಾಗಿ ಘೋಷಿಸುತ್ತಾನೆ. ಥಿಯೋಫೈಲಸ್ ಎಂಬ ಕ್ರೈಸ್ತ ಪಾದ್ರಿ ಅಲೆಕ್ಸಾಂಡ್ರಿಯಾ ನಗರದ ಆಡಳಿತಾಧಿಕಾರಿಯಾಗಿದ್ದ. ಈತ ಥಿಯೋಡೋಸಿಯಸ್ ನ ಆದೇಶದ ಮೇರೆಗೆ ಗ್ರೀಕ್ ಸಂಸ್ಕೃತಿಗೆ ಸೇರಿದ ಎಲ್ಲಾ ದೇವಾಲಯಗಳನ್ನು ನಾಶಗೊಳಿಸಲು ಆದೇಶ ಕೊಡುತ್ತಾನೆ. ರೋಮ್ ಸೈನಿಕರು ಸೆರಾಪಿಯಂ ದೇವಸ್ಥಾನಕ್ಕೆ ಬೆಂಕಿಯಿಡುಯುತ್ತಾರೆ.ದೇವಸ್ಥಾನದೊಂದಿಗೆ ಲೈಬ್ರರಿಯೂ ಸುಟ್ಟು ಬೂದಿಯಾಗುತ್ತದೆ. ದಾರಿಯಲ್ಲಿ ತನ್ನ ರಥದಲ್ಲಿ ಹೋಗುತ್ತಿದ್ದ ಹೈಪೇಶಿಯಾಳನ್ನು ಕ್ರೈಸ್ತ ಮತಾಂಧರ ಗುಂಪೊಂದು ಅಡ್ಡಗಟ್ಟುತ್ತದೆ. ಅವಳನ್ನು ರಥದಿಂದ ಹೊರಗೆಳೆದು, ಇಗರ್ಜಿಗೆ ದರ ದರನೆ ಎಳೆದುಕೊಂಡು ಹೋಗುತ್ತಾರೆ. ಜಗತ್ತಿಗೆಲ್ಲಾ ಶಾಂತಿ ಸಂದೇಶ ಸಾರಿದ ಏಸುವಿನ ಮೂರ್ತಿಯ ಸಮ್ಮುಖದಲ್ಲೇ ಅವಳನ್ನು ವಿವಸ್ತ್ರಗೊಳಿಸಿ, ಹರಿತವಾದ ಮಡಕೆಯ ಚೂರುಗಳಿಂದ ಅವಳ ಚರ್ಮ ಸುಲಿದು, ಆಕೆ ಜೀವಂತವಿರುವಾಗಲೇ ಬೆಂಕಿ ಹಚ್ಚಿ, ಭೀಕರವಾಗಿ ಹತ್ಯೆ ಮಾಡಲಾಗುತ್ತದೆ. ಹೈಪೇಶಿಯಾಳನ್ನು  Witch Hunt ನೆಪದಲ್ಲಿ ಬಲಿಯಾದ ಅಸಂಖ್ಯಾತ ಮಹಿಳೆಯರಲ್ಲಿ ಮೊದಲಿಗಳು ಎಂದರೆ  ತಪ್ಪಾಗಲಾರದು.
ಹೈಪೇಶಿಯಾ


ಹೀಗೊಂದು ಅದ್ಭುತ ಸಂಸ್ಕೃತಿಯು ಧರ್ಮ, ರಾಜಕೀಯ ಹಾಗೂ ಮತಾಂಧತೆಗಳ ನಡುವೆ ಸಿಲುಕಿ ಸರ್ವನಾಶವಾಗುತ್ತದೆ. ಈ ಕಾರಣಗಳಿಗಾಗಿಯೇ ನಾನು, ಒಂದು ವೇಳೆ ಈ ನಾಗರೀಕತೆಯು ಆಬಾಧಿತವಾಗಿ ಬೆಳೆದಿದ್ದರೆ, ವೈಜ್ಞಾನಿಕ ಕ್ರಾಂತಿಗಾಗಿ ಕೋಪರ್ನಿಕಸ್ ವರೆಗೂ ಕಾಯಬೇಕಾಗುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿದ್ದು. ಒಂದು ರೀತಿಯಲ್ಲಿ ಅಲೆಕ್ಸಾಂಡ್ರಿಯಾದ ಪತನದಿಂದ ವಿಶ್ವ-ನಾಗರಿಕತೆ ಸಾವಿರ ವರ್ಷಗಳಷ್ಟು ಅಮೂಲ್ಯ ಸಮಯವನ್ನು ಕಳೆದುಕೊಂಡಿತೆಂದೇ ವಿಜ್ಞಾನದ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಲೈಟ್ ಹೌಸ್ ಇಂದಿಗೂ ಅಲೆಕ್ಸಾಂಡ್ರಿಯಾದಲ್ಲಿ ಮೌನವಾಗಿ ನಿಂತಿದೆ.
 ಅಲೆಕ್ಸಾಂಡ್ರಿಯಾದ   ಲೈಟ್  ಹೌಸ್ (ಕಲಾವಿದನ ಕಲ್ಪನೆಯಲ್ಲಿ)

ಇಂದು ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದೇವೆ, ಕಲೆ, ರಾಜಕೀಯ ರಂಗಗಳಲ್ಲೂ ಉದಾತ್ತ ಚಿಂತನೆಗಳನ್ನು ಹೊಂದಿರತಕ್ಕಂತಹ ಮೌಲ್ಯಗಳನ್ನು ಹಲವು ದಾರ್ಶನಿಕರು ನಮ್ಮ ಮುಂದಿಟ್ಟಿದ್ದಾರೆ. ಆದರೂ ಹಿಟ್ಲರ್ ನಂತಹವರ ಆಡಳಿತದಲ್ಲಿ ಸಿಗ್ಮಂಡ್ ಫ್ರಾಯ್ಡ್ ರವರ ಪುಸ್ತಕಗಳನ್ನು ಸುಟ್ಟಾಗ, ಐನ್ ಸ್ಟೈನ್ ನಂತಹ ವಿಜ್ಞಾನಿಗಳು ಜೀವಕ್ಕೆ ಹೆದರಿ ತಮ್ಮ ತಾಯಿನೆಲವನ್ನೇ ತೊರೆದು ಪರದೇಶದಲ್ಲಿ ಆಶ್ರಯ ಪಡೆದಾಗ, ಸತ್ಯ ಹೇಳಿದ್ದಕ್ಕಾಗಿ ಇಂದಿಗೂ ಹಲವು ಲೇಖಕರ ಹಾಗೂ ಚಿಂತಕರ ಮೇಲೆ ಧಾರ್ಮಿಕ ಹಾಗೂ ರಾಜಕೀಯ ಶಕ್ತಿಗಳು ಹಲ್ಲೆ ನಡೆಸಿದಾಗ ನಾವು ಇತಿಹಾಸದಿಂದ ಏನೇನೂ ಪಾಠ ಕಲಿತಿಲ್ಲವೇನೋ ಅನಿಸಿಬಿಡುತ್ತದೆ. ಧಾರ್ಮಿಕ ಮತಾಂಧತೆ ಹಾಗೂ ರಾಜಕೀಯ ಸ್ವಾರ್ಥಗಳು ಮತ್ತೊಂದು ಲೈಬ್ರರಿಯನ್ನು ಅಥವಾ ಮತ್ತೊಬ್ಬ ಹೈಪೇಶಿಯಾಳನ್ನು ಬಲಿ ತೆಗೆದುಕೊಳ್ಳದೇ ಇರುವಹಂತಹ ಸಮಾಜವನ್ನು ಸೃಷ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ?



Friday, February 11, 2011

ತುಂಗುಸ್ಕಾದಲ್ಲಿ ನಡೆದ್ದಾದರೂ ಏನು?




ಕೆಲವರಿರುತ್ತಾರೆ ಅವರಿಗೆ ಕೆಲವು ಘಟನೆಗಳ ಹಿಂದಿನ ರಹಸ್ಯಗಳು ಬಗೆಹರಿಯದಿದ್ದರೇನೇ ಸಂತೋಷಎಲ್ಲಾ ಸಂಗತಿಗಳೂ ಸ್ಪಟಿಕದಷ್ಟೇ ಸ್ಪಷ್ಟವಾಗಿಬಿಟ್ಟರೆ ಜೀವನದಲ್ಲಿ ಇನ್ನೇನೂ ಸ್ವಾರಸ್ಯ ಇರೋಲ್ಲ ಅಲ್ವ? ಹಾಗೆಂದೇ ಇವರು  ವಿಜ್ಞಾನಿಗಳು ಕೆಲವು ಸಂಗತಿಗಳನ್ನು ಎಷ್ಟೇ ಸ್ಪಷ್ಟವಾಗಿ ವಿವರಿಸಿದರೂ ಅದನ್ನು ಒಪ್ಪದೆ ಅದರಲ್ಲಿ ಮತ್ತಿನ್ನೇನೋ ರಹಸ್ಯವನ್ನು ಹುಡುಕುತ್ತಿರುತ್ತಾರೆ. "ಇದು ಇಷ್ಟು ಸರಳವೇ?... ಸಾಧ್ಯವೇ ಇಲ್ಲ… ಇದರಲ್ಲಿ ಬೇರೆ ಇನ್ನೇನೋ ಇರಬೇಕು" ಎಂದು ವಾದಿಸುತ್ತಾರೆ. ಇವು UFO ಗಳ ವಿಚಾರವಾಗಿರಬಹುದು, ಬರ್ಮುಡಾ ಟ್ರೈಯಾಂಗಲ್ ವಿಚಾರವಾಗಿರಬಹುದು ಅಥವಾ ಡಾರ್ವಿನ್ನಿನ ವಾದವನ್ನು ತಳ್ಳಿ ಹಾಕುವಂತಹ ಸಾಕ್ಷಿಗಳಿವೆಯೆನ್ನುವಂತಹ ವಿಚಾರಗಳೇ ಆಗಿರಬಹುದು. ಇವೆಲ್ಲವುಗಳನ್ನು ವಿಜ್ಞಾನಿಗಳು ಎಷ್ಟೇ ಸ್ಪಷ್ಟವಾಗಿ ಬಿಡಿಸಿ ಹೇಳಿದರೂ ಇವನ್ನು ಇನ್ನೂ ಬಗೆಹರಿಯದ ರಹಸ್ಯಗಳೆಂಬಂತೆ ನಮ್ಮ ಮಾಧ್ಯಮಗಳು ವಿಜೃಂಭಿಸುತ್ತಿರುವುದೇಕೆ?  ದಿನಕ್ಕೊಂದರಂತೆ ಇಂತಹ ಇಲ್ಲದ ರಹಸ್ಯಗಳನ್ನು ಹುಟ್ಟು ಹಾಕುವುದರ ಹಿಂದಿನ ಉದ್ದೇಶವೇ ನನಗೊಂದು ರಹಸ್ಯವಾಗಿ ಉಳಿದಿದೆ!
 ಜೂನ್ 30, 1908  ರಲ್ಲಿ ನಡೆದ ತುಂಗುಸ್ಕಾ ಘಟನೆಯೊಂದಿಗೆ ತಳಕು ಹಾಕಿಕೊಂಡ ಊಹಾಪೋಹಗಳು ಇದಕ್ಕೆ ಸೂಕ್ತ ಉದಾಹರಣೆಯಾಗಬಲ್ಲುದು. ಕೆಲ ವರ್ಷಗಳ ಹಿಂದೆ ಖ್ಯಾತ ಅಮೇರಿಕನ್ ಭೌತ ವಿಜ್ಞಾನಿ ಕಾರ್ಲ್ ಸಗಾನ್ ಅವರ 'ಕಾಸ್ಮೋಸ್'’ ಎಂಬ ಪುಸ್ತಕವನ್ನೋದಿದ್ದೆ. ಇದೇ ಹೆಸರಿನಲ್ಲಿ ಅವರು ಒಂದು ಟೆಲಿ-ಸೀರೀಸ್ ಸಹ ನಿರ್ಮಿಸಿದ್ದರು. ಎಂಬತ್ತರ ದಶಕದಲ್ಲಿ ಬರೆದಿದ್ದ ಪುಸ್ತಕದಲ್ಲಿ ಕಾರ್ಲ್ ಸಗಾನ್ ಯಾವುದೇ ಅನುಮಾನಗಳಿಗೆ ಎಡೆ ಮಾಡಿಕೊಡದೆ ಘಟನೆಯು ಏಕಾಯಿತು, ಹೇಗಾಯಿತು ಎಂದು ವಿವರಿಸಿದ್ದಾರೆ. ಅವರೊಬ್ಬರೇ ಅಲ್ಲಾ ಹಲವಾರು ವಿಜ್ಞಾನಿಗಳು ಈ ಘಟನೆಯ ಬಗ್ಗೆ ಇಂತಹುದೇ ಅಭಿಪ್ರಾಯಕ್ಕೆ ಬಂದಿದ್ದಾರೆ. ಅದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನೂ ಒದಗಿಸಿದ್ದಾರೆ. ಆದರೂ ಹಲವಾರು ಟಿ.ವಿ ಚಾನಲ್ ಗಳಲ್ಲಿ " ತುಂಗುಸ್ಕಾ ಘಟನೆ ಒಂದು ಬಗೆಹರಿಯದ ರಹಸ್ಯ..." ಅಂತೆಲ್ಲಾ ಇನ್ನೂ ಈ ಹಳಸಿದ ವಿಷಯವನ್ನೇ ಮತ್ತೆ ಮತ್ತೆ ವೀಕ್ಷಕರಿಗೆ ಉಣಬಡಿಸುತ್ತಿದ್ದಾರೆ.
ಬೆಳಗ್ಗೆ  ಸುಮಾರು 7  ಗಂಟೆಯ  ಸಮಯ.  ಊರು  ಈಗ  ತಾನೆ  ಎದ್ದು  ದಿನದ    ಚಟುವಟಿಕೆಗಳಿಗೆ    ತಯಾರಾಗುತ್ತಿತ್ತು. ಸ್ಥಳ : ತುಂಗುಸ್ಕಾ ನದಿಯ ಹತ್ತಿರವಿರುವ ‘ವನವಾರ’’ ಎಂಬ ಪುಟ್ಟ ಹಳ್ಳಿ. ಸೆಮೆನೊವ್ ಎಂಬಾತ ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆ ಬೆಳಗಿನ ತಿಂಡಿಗಾಗಿ ಕಾಯುತ್ತಾ ಕುಳಿತಿದ್ದ. ಇದ್ದಕ್ಕಿದ್ದಂತೆ ಅವನಿಗೆ ಉತ್ತರ ದಿಕ್ಕಿನಲ್ಲಿ ಆಕಾಶವು ಸೀಳಿದಂತೆ ಕಂಡಿತು.ಆ ಸೀಳು ಅಗಲವಾಗುತ್ತಾ ಹೋದಂತೆ ಭಯಂಕರವಾದ ಬೆಂಕಿಯ ಉಂಡೆಯೊಂದು ಅದರ ಮಧ್ಯದಿಂದ ಪ್ರತ್ಯಕ್ಷವಾಯಿತು. ಭೂಮಿ ತಲುಪುವ ಮುನ್ನವೇ ಆಕಾಶದಲ್ಲಿ ಅದು ಭಯಂಕರವಾಗಿ ಸ್ಫೋಟಗೊಂಡಿತು. ಆ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸ್ಫೋಟ-ಕೇಂದ್ರದಿಂದ ಸುಮಾರು ನಲವತ್ತು ಮೈಲಿ ದೂರದಲ್ಲಿ ಕುಳಿತಿದ್ದ ಸೆಮೆನೊವ್ ಕೆಲವು ಮೀಟರ್ ಗಳಷ್ಟು ಮೇಲೆ ಎಸೆಯಲ್ಪಟ್ಟ. ಅದು ಉಂಟು ಮಾಡಿದ ಉಷ್ಣತೆಯು ಸೆಮೆನೊವ್ ಗೆ ತನ್ನ ಬಟ್ಟೆಗಳೇ ಹೊತ್ತಿ ಉರಿಯುತ್ತಿರುವಂತೆ ಭಾಸವಾಯಿತು. ಈ ಸ್ಫೋಟದ ಹಿಂದೆಯೇ ಕಲ್ಲಿನ ಮಳೆ ಟಪ- ಟಪನೆ ಸದ್ದು ಮಾಡುತ್ತಾ ಸುರಿಯಿತು. ನೋಡ ನೋಡುತ್ತಲೇ ಸುಮಾರು ಎರಡು ಸಾವಿರ ಚದುರ ಕಿಲೋಮೀಟರ್ ತುಂಬಾ ಹರಡಿಕೊಂಡಿದ್ದ ಎಂಬತ್ತು ಲಕ್ಷ ಮರಗಳು ನಿರ್ನಾಮವಾಗಿಬಿಟ್ಟವು. ಈ ಸ್ಫೋಟ ಎಬ್ಬಿಸಿದ ಧೂಳು ಆಕಾಶದ ತುಂಬೆಲ್ಲಾ ಹರಡಿಕೊಂಡಿತು. ಈ ಧೂಳು ಸೂರ್ಯನ ಕಿರಣಗಳನ್ನು ಅದ್ಯಾವ ಪರಿ ಚದುರಿಸಿದುವೆಂದರೆ ಸಾವಿರಾರು ಮೈಲಿ ಪಶ್ಚಿಮಕ್ಕಿರುವ ಲಂಡನ್ನಿನಲ್ಲಿ ಮಧ್ಯರಾತ್ರಿಯಲ್ಲಿಯೂ ಯಾವುದೇ ವಿದ್ಯುದ್ದೀಪದ ಸಹಾಯವಿಲ್ಲದೆ ವೃತ್ತಪತ್ರಿಕೆಗಳನ್ನು ಓದಬಹುದಾಗಿತ್ತು. ಸ್ಫೋಟ-ಕೇಂದ್ರದಿಂದ ಉದ್ಭವಿಸಿದ ಅಲೆಯು ಭೂಮಿಯನ್ನು ಎರಡು ಬಾರಿ ಪ್ರದಕ್ಷಿಣೆ ಹಾಕುವಷ್ಟು ಶಕ್ತಿಶಾಲಿಯಾಗಿತ್ತು! ಈ ಸ್ಫೋಟವು ಅಮೇರಿಕವು ಹಿರೋಶಿಮದಲ್ಲಿ ಸ್ಫೋಟಿಸಿದ ಅಣು ಬಾಂಬಿಗಿಂತಲೂ ಸುಮಾರು ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು. ಇಂತಹ ಘಟನೆಯೇನಾದರು ಇಂದು ನಡೆದಿದ್ದರೆ ಇದು ಯಾವುದೋ ಖದೀಮ ದೇಶದವರು ಅಣು ಬಾಂಬನ್ನು ಸ್ಫೋಟಿಸಿರಬಹುದೆಂಬ ಊಹಾಪೋಹಗಳು ಸೃಷ್ಟಿಯಾಗುತ್ತಿತ್ತು ಹಾಗೂ ದೇಶಗಳ ನಡುವೆ ಅಣು ಯುದ್ಧ ಸಂಭವಿಸುವ ಪರಿಸ್ಥಿತಿ ಉದ್ಭವವಾಗುತ್ತಿತ್ತೇನೋ ಎನಿಸುತ್ತದೆ. ಅದೃಷ್ಟವಶಾತ್ ಆಗ ಮಾನವ ಇನ್ನೂ ಅಣು ಬಾಂಬನ್ನು ಕಂಡು ಹಿಡಿದಿರಲಿಲ್ಲ.
ಇಷ್ಟು ದೊಡ್ಡ ಸ್ಫೋಟ ಸಂಭವಿಸಿದರೂ ಮಾಸ್ಕೋದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿದ್ದ ಜಾರ್ ದೊರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ದೂರದ ಸೈಬೇರಿಯಾದ ಕಾಡಿನಲ್ಲಿ ನಡೆದ ಘಟನೆಗೆ ಅವನಾದರೂ ಯಾಕೆ ತಲೆ ಬಿಸಿ ಮಾಡಿಕೊಳ್ಳಬೇಕು!  ಈ ಬಗ್ಗೆ ಇಂಗ್ಲೆಂಡಿನ ಕೆಲವು ಪತ್ರಿಕೆಗಳು ಒಂದೆರಡು ದಿನ ತಮಗೆ ತೋಚಿದ್ದನ್ನು ಗೀಚಿ ಸುಮ್ಮನಾಗಿಬಿಟ್ಟವು. ಈ ಘಟನೆ ನಡೆದು ಸುಮಾರು ಹದಿಮೂರು ವರ್ಷಗಳ ನಂತರ ಅಂದಿನ ಸೋವಿಯೆತ್ ಸರ್ಕಾರವು ಇದರ ತನಿಖೆಗೆಂದು ಒಂದು ತಂಡವನ್ನು ನಿಯೋಜಿಸಿತು. ಲಿಯೋನಿಡ್ ಕ್ಯೂಲಿಕ್ ಎಂಬ ಖನಿಜ ಶಾಸ್ತ್ರಜ್ಞ ಈ ತಂಡದ ನಾಯಕನಾಗಿದ್ದ. ರಸ್ತೆ ತುಂಬಾ ದುರ್ಗಮವಾಗಿದ್ದರಿಂದ ಅವರಿಗೆ ಸ್ಫೋಟದ ಕೇಂದ್ರ ಸ್ಥಳ ತಲುಪುವುದು ಸಾಧ್ಯವಾಗಲಿಲ್ಲ. 1927 ರಲ್ಲಿ ಮತ್ತೆ ಹೆಚ್ಚಿನ ತಯಾರಿಯೊಂದಿಗೆ ತೆರಳಿದ ಅವರು ಆ ಸ್ಥಳ ತಲುಪುವಲ್ಲಿ ಯಶಸ್ವಿಯಾದರು.
                                                 
ಘಟನಾಸ್ಥಳದಲ್ಲಿ ಕಂಡುಬಂದ ದೃಶ್ಯ- ಮರಗಳು ರೆಂಬೆ-ಕೊಂಬೆಗಳನ್ನು ಕಳಚಿಕೊಂಡು ಬಿದ್ದಿವೆ
ಪ್ರಾರಂಭದಲ್ಲಿಅಲ್ಲಿನ ಜನರು ಸ್ಫೋಟ ಸಂಭವಿಸಿರಬಹುದಾದ ಕೇಂದ್ರ ಸ್ಥಳವನ್ನು ತೋರಿಸಲು ನಿರಾಕರಿಸಿದರು, ಕೊನೆಗೂ ಅವರನ್ನು ಒಪ್ಪಿಸಿ ಸ್ಥಳ ತಲುಪುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ನೋಡಿದ ದೃಶ್ಯ ದಿಗ್ಭ್ರಮೆ ಹುಟ್ಟಿಸುವಂತಹದ್ದಾಗಿತ್ತು. ಸುಮಾರು ಇಪ್ಪತ್ತು ಮೈಲಿ ವ್ಯಾಸವುಳ್ಳ ವೃತ್ತಾಕಾರ ರೂಪದಲ್ಲಿ ಸುಮಾರು ಎಂಬತ್ತು ಲಕ್ಷ ಮರಗಳು, ಕೇಂದ್ರದಿಂದ ವಿರುದ್ಧಾಭಿಮುಖವಾಗಿ, ರೆಂಬೆ-ಕೊಂಬೆ, ತೊಗಟೆಗಳನ್ನೆಲ್ಲಾ ಕಳಚಿಕೊಂಡು, ಸುಟ್ಟು ಮಲಗಿಬಿಟ್ಟಿದ್ದವು. ಕೇಂದ್ರ ಸ್ಥಳದಲ್ಲಿ ಮರಗಳು ಸುಟ್ಟು ಬೆತ್ತಲಾಗಿ ಎಲೆಕ್ಟ್ರಿಕ್ ಕಂಬಗಳಂತೆ ನಿಂತಿದ್ದವು. ಕ್ಯೂಲಿಕ್ ನ ತಂಡವು ಆ ಸ್ಥಳವನ್ನು ಕೂಲಂಕಷವಾಗಿ ಪರೀಕ್ಷಿಸಿ, ಘಟನೆಯ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆದುಕೊಂಡು ತಮ್ಮ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದರು. ಆ ನಂತರ ಹಲವಾರು ತಂಡಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿದವು ಹಾಗೂ ಈ ಮಹಾಸ್ಫೋಟದ ಹಿಂದಿನ ಕಾರಣಗಳ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡವು. ಈ ಬಗ್ಗೆ ಕೆಲವು ಪ್ರಮುಖ ವಾದಗಳನ್ನು(Theory) ಗಮನಿಸೋಣ-
1.      ದೇವರ ಕೋಪ: ಸ್ಥಳೀಯರ ವಾದವೇನೆಂದರೆ– ಜಗತ್ತಿನಲ್ಲಿ ಪಾಪ ಕಾರ್ಯಗಳು ಹೆಚ್ಚಾಗಿರುವುದರಿಂದ ದೇವರು ಕೋಪಗೊಂಡು ಜನರನ್ನು ಶಿಕ್ಷಿಸಿದ್ದಾನೆನ್ನುವುದು. ಇದನ್ನು ವಾದ ಎನ್ನುವುದಕ್ಕಿಂತ ನಂಬಿಕೆ ಎನ್ನುವುದೇ ಸೂಕ್ತ. ಇಂತಹ ನಂಬಿಕೆಗಳ ಬಗ್ಗೆ ತಾರ್ಕಿಕ ವಿಷ್ಲೇಷಣೆ ನಡೆಸುವುದು ನನ್ನ ಈ ಲೇಖನದ ಉದ್ದೇಶವಲ್ಲ. ಅದನ್ನು ನಿಮ್ಮ ವಿವೇಚನೆಗೇ  ಬಿಡುತ್ತೇನೆ.

2.      ಕಪ್ಪು ರಂಧ್ರ (Back Hole): ಕೆಲವರ ಪ್ರಕಾರ ಅಸಾಧಾರಣ ದ್ರವ್ಯ ರಾಶಿ ಹಾಗೂ ಅತಿ ಚಿಕ್ಕ ವ್ಯಾಸವುಳ್ಳ ಕಪ್ಪು ರಂಧ್ರವೊಂದು ಭೂಮಿಯ ಮೂಲಕ ಹಾದು ಹೋಗಿದ್ದರಿಂದ ಹೀಗಾಗಿರಬಹುದೆಂದು ವಾದಿಸುತ್ತಾರೆ. ಒಂದು ವೇಳೆ ಹೀಗಾಗಿದ್ದರೆ ತುಂಗುಸ್ಕಾ ನದಿಯ ಕಣಿವೆಯಿಂದ ಪ್ರವೇಶಿಸಿದ ಕಪ್ಪು ರಂಧ್ರವು ಅಟ್ಲಾಂಟಿಕ್ ಸಮುದ್ರದಿಂದ ಹೊರ ಹೋಗಿರಬೇಕಾಗಿತ್ತು. ಆದರೆ ತುಂಗುಸ್ಕಾ ಕಣಿವೆಯಲ್ಲಿ ಕಂಡು ಬಂದ ಈ ತರಹದ ಯಾವುದೇ ವಿದ್ಯಮಾನವು ಅಟ್ಲಾಂಟಿಕ್ ಸಮುದ್ರದಲ್ಲಿ ಕಂಡು ಬರಲಿಲ್ಲ.

3.     ಅನ್ಯಗ್ರಹ ಜೀವಿಗಳು: ಕೆಲವರ ಅಭಿಪ್ರಾಯದ ಪ್ರಕಾರ ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿಕೊಟ್ಟಿರಬಹುದು ಹಾಗೂ ಪರಮಾಣು ಬಾಂಬನ್ನು ಸ್ಫೋಟಿಸಿರಬಹುದು ಎಂಬುದು. ತಮ್ಮ ಈ ವಾದಕ್ಕೆ ಅವರು ಮುಂದಿಡುವ ಸಾಕ್ಷಿಯೆಂದರೆ ಸ್ಫೋಟ ಹೊರಹೊಮ್ಮಿಸಿದ ಅಗಾಧ ಪ್ರಮಾಣದ ಶಕ್ತಿ ಹಾಗೂ ಆ ಸ್ಥಳದಲ್ಲಿ ಕಂಡು ಬಂದ ಸಸ್ಯಗಳ ಮೇಲಿನ ವಿಕಿರಣದ ಪ್ರಭಾವ.

 ಅಣುಬಾಂಬ್ ಸ್ಫೋಟಗೊಂಡಾಗ ಅಗಾಧ ಪ್ರಮಾಣದ ವಿಕಿರಣ ಉಂಟಾಗುತ್ತದೆ ಹಾಗೂ ಆ ಕಾಲದಲ್ಲಿ ಅಣು ಬಾಂಬನ್ನು ಮಾನವ ಇನ್ನೂ ಕಂಡುಹಿಡಿದಿದ್ದಿಲ್ಲವಾದ್ದರಿಂದ ಇದು ಯಾವುದೋ ಅನ್ಯಗ್ರಹ ಜೀವಿಗಳ ಕೆಲಸವೇ ಆಗಿರಬೇಕೆಂದು ವಾದಿಸುತ್ತಾರೆ. ಈ ಸ್ಫೋಟದಲ್ಲಿ ಉತ್ಪತ್ತಿಯಾದ ಅಗಾಧ ಶಕ್ತಿಯೂ ಇದೊಂದು ಅಣುಬಾಂಬ್ ಸ್ಫೋಟವೇ ಆಗಿರಬೇಕು ಎಂದು ವಾದಿಸುತ್ತಾರೆ. ಆದರೆ ಈ ವಾದವು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ- ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಅಣುಬಾಂಬನ್ನು ಏಕಾದರೂ ಸ್ಫೋಟಿಸಬೇಕು? ಈ ಸ್ಫೋಟದಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ಸಾಯಲಿಲ್ಲ. ಏಕೆಂದರೆ ಸ್ಫೋಟ ಭೂಮಿಗಿಂತ ಸುಮಾರು 5 ಕಿ.ಮೀ ಎತ್ತರದಲ್ಲಾಗಿತ್ತು. ಅನ್ಯಗ್ರಹ ಜೀವಿಗಳ ಉದ್ದೇಶವೇನೇ ಇರಲಿ, ಭೂಮಿಗೆ ಬಂದು ತಲುಪುವಷ್ಟು ಅದ್ಭುತ ತಂತ್ರಜ್ಞಾನವನ್ನು ಬೆಳೆಸಿಕೊಂಡವರು ಇಲ್ಲಿ ಬಾಂಬನ್ನು ಸ್ಫೋಟಿಸವುದರಲ್ಲಿ ಎಡವಟ್ಟು ಮಾಡಿಕೊಂಡಿದ್ದು ಅಸಹಜವೆನಿಸುವುದಿಲ್ಲವೇ? ಹಿರೋಶಿಮಾ ಸ್ಫೋಟದಲ್ಲಿ ವಿಕಿರಣದ ಪ್ರಭಾವದಿಂದಲೇ ಸಾವಿರಾರು ಜನ ಅಸು ನೀಗಿದರು. ಆದರೆ ಇದಕ್ಕೆ ಹೋಲಿಸಿದಾಗ ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದ ತುಂಗುಸ್ಕಾ ಸ್ಫೋಟದಲ್ಲಿ ಕಂಡು ಬಂದ ವಿಕಿರಣದ ಪ್ರಮಾಣ ಇಷ್ಟು ಕಡಿಮೆಯೇಕೆ?. ‘ಅನ್ಯಗ್ರಹ’ ವಾದಿಗಳ ಬಳಿ ಈ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ.

4.    ಉಲ್ಕಾ-ವಾದ- ಈ ವಾದ ನನಗೆ ಹೆಚ್ಚು ಸಮಂಜಸವೆನಿಸುತ್ತದೆ ಹಾಗೂ ವಿಜ್ಞಾನಿ ವಲಯದಲ್ಲಿ ಇದಕ್ಕೆ ಈವರೆಗೂ ಯಾವುದೇ ತಕರಾರು ಕಂಡು ಬಂದಿಲ್ಲ.

ಕಲಾವಿದನ ಕಲ್ಪನಾ ಚಿತ್ರ
ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ಗ್ರಹಗಳು, ಉಪಗ್ರಹಗಳು ಹಾಗು ಸಾವಿರಾರು ಧೂಮಕೇತುಗಳ ಜೊತೆಗೆ ಲಕ್ಷಾಂತರ ಉಲ್ಕೆಗಳು ಸಹ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿವೆ. ಈ ಉಲ್ಕೆಗಳ ಗಾತ್ರ ಕೆಲವೇ ಕೆಲವು ಸೆಂಟಿಮೀಟರ್ ಗಳಿಂದ ಹಿಡಿದು ಹಲವು ಮೈಲಿಗಳಷ್ಟಾಗಿರಬಹುದು. ಹಲವಾರು ಬಾರಿ ಈ ಉಲ್ಕೆಗಳು ಭೂಮಿಯ ಸಮೀಪ ಹಾದು ಹೋಗುವಾಗ ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ವಾಯುಮಂಡಲವನ್ನು ಪ್ರವೇಶಿಸುತ್ತವೆ. ನಮ್ಮ ವಾಯುಮಂಡಲವು ಹಲವಾರು ರೀತಿಯಲ್ಲಿ ನಮಗೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಈ ಉಲ್ಕೆಗಳು ಭೂಮಿಯನ್ನಪ್ಪಳಿಸುವುದನ್ನು ತಪ್ಪಿಸುವುದೇ ನಮ್ಮ ವಾಯುಮಂಡಲ. ಉಲ್ಕೆಗಳು ಭೂಮಿಗೆ ಹತ್ತಿರ ಬಂದಂತೆಲ್ಲಾ ಗುರುತ್ವ ಬಲವು ಹೆಚ್ಚಾಗಿ ಅಸಾಧಾರಣ ವೇಗ ಪಡೆದುಕೊಳ್ಳುತ್ತವೆ. ಈ ವೇಗದೊಂದಿಗೆ ಅವು ವಾಯುಮಂಡಲವನ್ನು ಪ್ರವೇಶಿಸಿದಾಗ ವಾಯುಮಂಡಲದೊಂದಿಗೆ ಘರ್ಷಣೆಯುಂಟಾಗಿ ತೀವ್ರ ಉಷ್ಣತೆಯುಂಟಾಗುತ್ತದೆ. ಈ ಉಷ್ಣತೆಯಿಂದಾಗಿ ಅವುಗಳ ಆಂತರಿಕ ಒತ್ತಡ ಹೆಚ್ಚಾಗಿ ಭೂಮಿ ತಲುಪುವ ಮುಂಚೆಯೇ ಸ್ಫೋಟಗೊಳ್ಳುತ್ತವೆ, ಹಲವಾರು ಬಾರಿ ನಮಗೆ ರಾತ್ರಿ ವೇಳೆ ಆಕಾಶದಲ್ಲಿ ನಕ್ಷತ್ರಗಳು ಬೀಳುತ್ತಿದ್ದಂತೆ ಭಾಸವಾಗುವುದಿಲ್ಲವೆ (Shooting Stars)?  ಇವು ನಾನು ಮೇಲೆ ವಿವರಿಸಿದ ವಿದ್ಯಮಾನವಲ್ಲದೇ ಬೇರೇನೂ ಅಲ್ಲ.
ತುಂಗುಸ್ಕಾ ಸ್ಫೋಟವೂ ದೊಡ್ಡದಾದ ಉಲ್ಕೆಯೊಂದು ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದ್ದರಿಂದ ಸಂಭವಿಸಿತೆಂದು ವಿಜ್ಞಾನಿಗಳು ಹೇಳುತ್ತಾರೆ. ಇಲ್ಲಿ ಸ್ಫೋಟಗೊಂಡ ಉಲ್ಕೆಯ ದ್ರವ್ಯರಾಶಿ ಮತ್ತು ಸುತ್ತಳತೆ (ಸುಮಾರು 45 ಕಿಮೀ ಎಂದು ಅಂದಾಜಿಸಲಾಗಿದೆ) ಸಾಮಾನ್ಯಕ್ಕಿಂತ ಹೆಚ್ಚಾಗಿದ್ದುದರಿಂದ ಭೂಮಿಯ ಮೇಲ್ಮೈಗೆ  ತೀರಾ ಹತ್ತಿರದಲ್ಲಿ ಸ್ಫೋಟಿಸಿತು. ಈ ಸ್ಫೋಟದಲ್ಲಿ ಸುಮಾರು 15 ಮೆಗಾ-ಟನ್ನಿನಷ್ಟು ಶಕ್ತಿ ಬಿಡುಗಡೆಯಾಯಿತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಶಕ್ತಿಯು ಒಮ್ಮೆಲೇ  ಬಿಡುಗಡೆಯಾದಲ್ಲಿ ವಿಕಿರಣದ ಸಾಧ್ಯತೆಯೂ ಇರುತ್ತದೆ ಎಂದು ಭೌತವಿಜ್ಞಾನಿಗಳು ಹೇಳುತ್ತಾರೆ. ಇಷ್ಟೇ ಅಲ್ಲದೆ ಘಟನಾ ಸ್ಥಳದಲ್ಲಿ ಸಣ್ಣ ಸಣ್ಣ ವಜ್ರದ ತುಣುಕುಗಳೂ ಹರಡಿಕೊಂಡಿರುವುದು ಕಂಡು ಬಂದಿದೆ. ಹಲವು ಉಲ್ಕೆಗಳಲ್ಲಿ ವಜ್ರ ಇರುವುದು ಖಾತ್ರಿಯಾಗಿದೆ. ಇನ್ನೊಂದು ಮುಖ್ಯ ವಿಷಯವೆಂದರೆ - ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಸ್ಫೋಟದ ಹಿಂದೆಯೇ ಕಲ್ಲಿನ ಮಳೆಯು ಟಪ-ಟಪ ಸದ್ದಿನೊಂದಿಗೆ ಸುರಿಯಿತು ಎಂದು ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಉಲ್ಕೆಯು ಸ್ಫೋಟಗೊಂಡಾಗ  ಅದರ ತುಣುಕುಗಳು ಸುರಿದಿರಬೇಕು ಎಂಬುದನ್ನು ಸೂಚಿಸುತ್ತದೆ. ಇವೆಲ್ಲಾ ಸಾಕ್ಷಿಗಳನ್ನು ಗಮನಿಸಿದರೆ ಉಲ್ಕಾ-ವಾದವು  ಹೆಚ್ಚು ಸರಳ ಹಾಗೂ ಅಪ್ಯಾಯಮಾನವಾಗಿ ಕಾಣುತ್ತದೆ.

ವಿಜ್ಞಾನದಲ್ಲಿ ಒಂದು ಸಂಗತಿಯ ಬಗ್ಗೆ ಹಲವು ವಾದಗಳು (Theory) ಹುಟ್ಟಿಕೊಂಡಾಗ ಅವುಗಳಲ್ಲಿ ಯಾವುದು  ಸರಳವಾಗಿರುತ್ತದೋ ಹಾಗೂ ಆ ಸಂಗತಿಗೆ ಸಂಬಂಧಿಸಿದಂತಹ  ಎಲ್ಲಾ ವಿದ್ಯಮಾನಗಳನ್ನು ಸಮಂಜಸವಾಗಿ ವಿವರಿಸುತ್ತದೋ ಅದನ್ನೇ ಸಾರ್ವತ್ರಿಕವಾಗಿ ಸ್ವೀಕರಿಸಲಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ, ಮೇಲೆ ಹೇಳಿದ ಎಲ್ಲಾ ವಾದಗಳಲ್ಲಿ  ಉಲ್ಕೆ ಸ್ಫೋಟಗೊಂಡಿರಬಹುದಾದ ವಾದವನ್ನೇ ನಾವು ಆರಿಸಿಕೊಳ್ಳಬೇಕಾಗುತ್ತದೆ. ಏನಂತೀರಿ?
------ಕೇಪಿ       

Heike ಏಡಿಗಳ ಒಗಟು



ಕಾರ್ಯ-ಕಾರಣ (cause & effect) ಸಂಬಂಧದ ತಪ್ಪು ತಿಳುವಳಿಕೆ ಹಲವು ಬಾರಿ ಮೂಢ ನಂಬಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ ಜಪಾನಿನಲ್ಲಿ ಈಗಲೂ ಪ್ರಚಲಿತವಿರುವ Heiki Crab ಗಳ ದಂತ ಕಥೆ. ಕ್ರಿ.ಶ. 1185 ರಲ್ಲಿ        ಜಪಾನಿನಲ್ಲಿ ಹೇಕಿ (Heiki) ಮತ್ತು ಗೆಂಜಿ(Genji) ಎಂಬ ಎರಡು ಸಮುರಾಯ್(Samurai) ಬಣಗಳಿದ್ದುವು. ಹೇಕಿಗಳು ಅಧಿಕಾರದಲ್ಲಿದ್ದರು. ಈ ಎರಡೂ ಬಣಗಳ ನಡುವೆ ದೀರ್ಘ ಕಾಲದ ರಕ್ತಸಿಕ್ತ ಯುದ್ಧದ ಇತಿಹಾಸವಿದೆ. ಏಪ್ರಿಲ್ 24 ಕ್ರಿ.ಶ.1185 ರಂದು ಇವರಿಬ್ಬರ ನಡುವೆ ಒಂದು ನಿರ್ಣಾಯಕ ಯುದ್ಧ ಸಂಭವಿಸಿತು. ಆಗ ಅಂಟೋಕು ಎಂಬ ಪುಟ್ಟ ಬಾಲಕ ಜಪಾನಿನ (ಹೇಕಿಗಳ) ಸಾಮ್ರಾಟನಾಗಿದ್ದ. ಡನೊಉರಾ (Danno-ura) ಪಟ್ಟಣದ ಹತ್ತಿರವಿರುವ ಸಮುದ್ರದಲ್ಲಿ ನಡೆದ ಭೀಕರ ಕಾಳಗದಲ್ಲಿ ಹೇಕಿಗಳ ಪತನವಾಯಿತು.ಅಸಂಖ್ಯಾತ ಹೇಕಿಗಳು ಹತರಾದರು. ಶತ್ರುಗಳಿಗೆ ಶರಣಾಗಿ ಚಹಿತ್ರಹಿಂಸೆ ಅನುಭವಿಸಿ ಸಾಯುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸೆಂದು ಹಲವಾರು ಹೆಂಗಸರು, ವೃದ್ಧರು, ತಮ್ಮ ಮಕ್ಕಳೊಂದಿಗೆ ಸಮುದ್ರದಲ್ಲಿ ಹಾರಿ ಸತ್ತರು. ಬಾಲಕ ಅಂಟೋಕುವನ್ನು ತಬ್ಬಿಕೊಂಡು ಅವನ ಅಜ್ಜಿಯೂ ಸಮುದ್ರದಲ್ಲಿ ಹಾರಿಕೊಂಡಳು. ಯುದ್ಧ ಮುಗಿದಾಗ ಹೇಕಿಗಳಲ್ಲಿ ಬದುಕುಳಿದ್ದದ್ದು ಕೇವಲ 43 ಮಹಿಳೆಯರಷ್ಟೆ. ಯುದ್ಧ ಮುಗಿದ ನಂತರ ಆ ಮಹಿಳೆಯರು ಅಲ್ಲೇ ಡನೋಉರಾದ ತೀರದಲ್ಲಿ ಹೂವು ಹಣ್ಣು ಮಾರುತ್ತಾ, ಡನೊಉರಾದ ಬೆಸ್ತರೊಡನೆ ಮದುವೆ ಮಾಡಿಕೊಂಡು ಜೀವನ ಸಾಗಿಸಿದರು.


ಇವರಿಂದ ಹುಟ್ಟಿದ ಸಂತತಿಯು ಡನೊಉರಾ ಯುದ್ಧದ ನೆನಪಿನಲ್ಲಿ ಪ್ರತೀ ವರ್ಷ ಏಪ್ರಿಲ್ 24 ರಂದು ಹಬ್ಬವನ್ನಾಚರಿಸುತ್ತಾರೆ, ಅಂಟೋಕುವಿನ ಸಮಾಧಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಈಗಲೂ ಅಲ್ಲಿರುವ ಜನರು ಹೇಕಿಗಳು ಎಲ್ಲಿಯೂ ಹೋಗಿಲ್ಲ ಅವರೆಲ್ಲರೂ ಸಮುದ್ರ ತಳದಲ್ಲಿ ಏಡಿಗಳಾಗಿ ಓಡಾಡುತ್ತಿದ್ದಾರೆ ಹಾಗೂ ಮುಂದೊಂದು ದಿನ ತಮಗಾದ ಅವಮಾನಕ್ಕೆ ಪ್ರತಿಕಾರ ಖಂಡಿತವಾಗಿಯೂ ತೀರಿಸಿಕೊಳ್ಳುತ್ತಾರೆ ಎಂದು ನಂಬುತ್ತಾರೆ. ಅವರ ಈ ನಂಬಿಕೆಗೆ ಕಾರಣವಿಲ್ಲದಿಲ್ಲ. ನೀವೆ ಒಮ್ಮೆ ಡನೋಉರಾಕ್ಕೆ ಹೋಗಿ ಅಲ್ಲಿ ಸಿಕ್ಕುವ ಏಡಿಗಳನ್ನೊಮ್ಮೆ ನೋಡಿದರೆ ಅವರ ಈ ದಂತಕಥೆಯನ್ನು ನಂಬದಿರಲು ಸಾಧ್ಯವಿಲ್ಲ. ಇಲ್ಲಿ ದೊರೆಯುವ ಏಡಿಗಳ ಮೇಲ್ಚಿಪ್ಪು ಥೇಟ್ ಸಮುರಾಯ್ ಮುಖವನ್ನು ಹೋಲುತ್ತವೆ. ಬೆಸ್ತರಿಗೆ ಸಮುರಾಯ್ ಮುಖವುಳ್ಳ ಏಡಿಗಳು ದೊರೆತಾಗ ಅವನ್ನು ತಿನ್ನುವುದಿಲ್ಲ, ಸಮುದ್ರಕ್ಕೇ ವಾಪಸ್ ಎಸೆದು ಬಿಡುತ್ತಾರೆ. ಭೂಮಿಯ ಬೇರೆ ಯಾವ ಭಾಗದಲ್ಲೂ ದೊರೆಯದ ಈ ಬಗೆಯ ಏಡಿಗಳು ಇಲ್ಲಿ ಹೇಗೆ ಬಂದುವು?
ಈ ವಿದ್ಯಮಾನ ಮೇಲ್ನೋಟಕ್ಕೆ ಅದ್ಭುತ  ಅಥವಾ ಪವಾಡವೆಂಬಂತೆ ಗೋಚರಿಸುತ್ತದೆ. ಆದರೆ ವಿಕಾಸವಾದದ ಸಿದ್ಧಾಂತಗಳನ್ನು ಕೂಲಂಕಷವಾಗಿ ಅರ್ಥ ಮಾಡಿಕೊಂಡ ಯಾರಿಗಾದರೂ ಇದರ ಹಿಂದಿನ ಮರ್ಮ ಅರ್ಥವಾಗುವುದರಲ್ಲಿ  ಹೆಚ್ಚು ಸಮಯ ಹಿಡಿಯುವುದಿಲ್ಲ. ನಿಮಗೆಲ್ಲಾ ತಿಳಿದಿರುವಂತೆ ಒಂದು ಜೀವಿಯಲ್ಲಿ ಭೂಮಿಯ ಮೇಲೆ ಬದುಕುಳಿಯಲು ಸಹಾಯಕಾರಿಯಾಗುವಂತಹ ಗುಣಗಳಿದ್ದರೆ ನಿಸರ್ಗವೇ ಆ ಜೀವಿಯನ್ನು ಈ ಭೂಮಿಯ ಮೇಲೆ ಬದುಕಲು ಆಯ್ಕೆ ಮಾಡಿಕೊಳ್ಳುತ್ತದೆ, ಹಾಗೂ ಅವುಗಳ ಸಂತತಿಯು ಮುಂದುವರಿಯುತ್ತದೆ. ಇದನ್ನು Theory of Natural Selection ಅಂತ ಕರೆಯುತ್ತಾರೆ. ಇದು ನಿಸರ್ಗ ವಾಗಲಿ, ಅಥವಾ ಜೀವಿಗಳಾಗಲಿ ಪ್ರಜ್ಞಾಪೂರ್ವಕವಾಗಿ ನಡೆಸುವಂಥ ಕ್ರಿಯೆಯಲ್ಲ. ಇದೊಂದು ‘ನಿಸರ್ಗ-ನಿಯಮ’ವಷ್ಟೇ. ಈ ನಿಯಮದೊಳಗೆ ನಾವೆಲ್ಲರೂ ಅಪ್ರಜ್ಞಾಪೂರ್ವಕವಾಗಿಯೇ ಬಂಧಿತರಾಗಿದ್ದೇವೆ. ಆದರೆ ಕೆಲವು ಜೀವಿಗಳ ಉಳಿಯುವ ಅಥವಾ ಅಳಿಯುವ ವಿಚಾರದಲ್ಲಿ ಮಾನವನೇ ಪರೋಕ್ಷವಾಗಿ ಕಾರಣನಾಗುತ್ತಾನೆ. ಇದನ್ನು Theory of Artificial Selection ಎಂದು ಕರೆತ್ತೇವೆ. ಇದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಹಲವಾರು ಪ್ರಭೇದದ ಸಾಕು ಪ್ರಾಣಿ ಮತ್ತು ಸಸ್ಯಗಳಿವೆ- ಹೆಚ್ಚು ಇಳುವರಿ ಕೊಡುವ ವಿವಿಧ ಸಸ್ಯಗಳು, ಹೆಚ್ಚು ಹಾಲು ಕೊಡುವ ಹಸು-ಎಮ್ಮೆಗಳು ಹಾಗೂ ಅಧಿಕ ಉಣ್ಣೆ ಕೊಡುವ ಕುರಿಗಳು. ವಿವಿಧ ಜೀವ ಸಂಕುಲಗಳ ವಿಕಾಸದ ಹಾದಿಯಲ್ಲಿ, ನೈಸರ್ಗಿಕ ಮತ್ತು ಕೃತ್ರಿಮವಾದ ಈ ಎರಡೂ ಪ್ರಕ್ರಿಯೆಗಳು ಮುಖ್ಯ ಪಾತ್ರ ವಹಿಸಿವೆ. ಇದರ ಫಲವೇ ಇಂದು ನಾವು ಕಾಣುವ ಅದ್ಭುತ ಜೀವ-ವೈವಿಧ್ಯಗಳಿಂದ ಕೂಡಿದ ಈ ಪೃಥ್ವಿ.



ಹೇಕಿ ಏಡಿಗಳ ವಿಚಾರದಲ್ಲಿ ಕೆಲಸ ಮಾಡಿರುವುದು Artficial Selection ಎಂಬ ಪ್ರಕ್ರಿಯೆ. ಡನೊಉರಾದ ಬೆಸ್ತರು ಅಪ್ರಜ್ಞಾಪೂರ್ವಕವಾಗಿಯೇ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಚಿಟ್ಟೆಗಳಲ್ಲಿ ಮೂಡುವಂತೆ ಏಡಿಗಳ ಚಿಪ್ಪಿನ ಮೇಲೂ ವಿವಿಧ ವೀನ್ಯಾಸ ಮೂಡುವುದು ಸಹಜ. ಆಕಸ್ಮಿವಾಗಿ ಕೆಲವೊಂದು ಏಡಿಗಳ ಮೇಲೆ ಮನುಷ್ಯರನ್ನು ಹೋಲುವಂತಹ ವಿನ್ಯಾಸ ಮೂಡಿದೆ. ಬೆಸ್ತರಿಗೆ ಇವು ಆಕಸ್ಮಿವಾಗಿ ದೊರೆತಾಗ ಅವುಗಳನ್ನು ತಿನ್ನಲು ಮನಸ್ಸಾಗದೇ ಹಾಗೆಯೇ ಸಮುದ್ರದಲ್ಲಿ ಬಿಸಾಡಿದ್ದಾರೆ. ಹೀಗೆ ಪ್ರತಿ ಬಾರಿ ಮನುಷ್ಯನ ಮುಖ ಹೊತ್ತ ಏಡಿಗಳು ದೊರೆತಾಗಲೆಲ್ಲಾ ಅವುಗಳನ್ನು ತಿನ್ನದೇ ಹಾಗೇ ಬಿಟ್ಟಿದ್ದಾನೆ. ಹೀಗೇ ಈ ಮಾನವ-ಮುಖೀ ಏಡಿಗಳಿಗೆ ತಮ್ಮ ರೂಪವು ವರದಾನವಾಗಿ ಲಭಿಸಿತು. ಹಾಗಾಗಿ ಕೆಲವೇ ಶತಮಾನಗಳಲ್ಲಿ ಅವುಗಳ ಸಂಖ್ಯೆ ಅಗಾಧವಾಗಿ ಬೆಳೆಯಿತು ಹಾಗೂ ಇನ್ನಿತರ ಏಡಿಗಳು ಆ ಕೊಲ್ಲಿಯಿದಿಂದ ನಿರ್ನಾಮವಾಗಿ ಹೋದುವು. ನೂರಾರು ವರ್ಷಗಳಿಂದ, ದಿನೇ-ದಿನೇ ನಡೆದುಕೊಂಡು ಬಂದಿರುವ ಈ ಪ್ರಕ್ರಿಯೆಯು ಕೇವಲ ಮಾನವ ಮುಖವನ್ನಷ್ಟೇ ಅಲ್ಲ ಬದಲಾಗಿ ಸಿಟ್ಟು ಹಾಗೂ ಅವಮಾನದಿಂದ ಬುಸುಗುಡುತ್ತಿರುವ ಸಮುರಾಯ್ ಮುಖವನ್ನು ಹೊತ್ತ ಏಡಿಗಳನ್ನು ಸೃಷ್ಟಿಸಿದೆ. ಈ ಇಡೀ ವಿದ್ಯಮಾನದ ವಿಷ್ಲೇಷಣೆ ಮಾಡುವಾಗ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಅದೆಂದರೆ ಈ ಇಡೀ ಪ್ರಕ್ರಿಯೆಯಲ್ಲಿ ಬೆಸ್ತರಾಗಲೀ, ಏಡಿಗಳಾಗಲೀ ಪ್ರಜ್ಞಾಪೂರ್ವಕವಾಗಿ ಭಾಗಿಯಾಗಿಲ್ಲವೆನ್ನುವುದು.